
ಹಿರಿಯೂರು:
ಕಾಡುಗೊಲ್ಲ, ಅಡವಿಗೊಲ್ಲ, ಹಟ್ಟಿಗೊಲ್ಲರ ಸಮುದಾಯಗಳು ಸಾಂಸ್ಥಿಕ ಕಲೆಯಲ್ಲಿ ಮುಂದುವರೆದಿದ್ದು ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದೆ. ಆದರೆ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದೆ. ಆದ್ದರಿಂದ ಸಮುದಾಯದ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಹೇಳಿದರು.
ನಗರದಲ್ಲಿ ಅಖಿಲ ಕರ್ನಾಟಕ ಪ್ರದೇಶ ಕಾಡುಗೊಲ್ಲರ, ಅಡವಿಗೊಲ್ಲರ ಹಟ್ಟಿ, ಗೊಲ್ಲರ ಸಂಘ, ಐಮಂಗಲ ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾಡುಗೊಲ್ಲರ ಜನಪದ ಸಾಂಸ್ಕೃತಿಕ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದ ಯೋಜನೆ ಹಾಗೂ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ಉನ್ನತಿ ಸಾಧಿಸುವಂತೆ ಕರೆ ನೀಡಿದರು. ಕಾಡುಗೊಲ್ಲ ಸಮುದಾಯದ ಜನಪದ ಪರಂಪರೆ, ಸಾಂಸ್ಕೃತಿಕ ಮೌಲ್ಯಗಳು ಹಾಗೂ ಸಮಾಜದ ಏಕತೆಯನ್ನು ಬಲಪಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳು ಮುಖ್ಯವಾಗುತ್ತವೆ ಎಂದರಲ್ಲದೆ,
ಸಮುದಾಯದ ಸರ್ವತೋಮುಖ ಪ್ರಗತಿ ಹಾಗೂ ಜನಪದ ಸಂಸ್ಕೃತಿ ಸಂರಕ್ಷಣೆಗೆ ನಮ್ಮ ಬೆಂಬಲವಿದೆ ಎಂಬುದಾಗಿ ಭರವಸೆ ನೀಡಿದರು. ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರನ್ನು ಜಿಲ್ಲಾ ಉಸ್ತುವಾರಿ ಸಚಿವರರಾದ ಡಿ.ಸುಧಾಕರ್ ಅವರು ಸನ್ಮಾನಿಸಿದರು.

ಚಿತ್ರದುರ್ಗದ ಶ್ರೀ ಕೃಷ್ಣಯಾದವಾನಂದಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿಸ್ಥಳೀಯ ಗ್ರಾಮಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮದ ಮುಖ್ಯಸ್ಥರು, ಸಮುದಾಯದ ಮುಖಂಡರು,ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
