
ಹಿರಿಯೂರು:
ವೇದಾವತಿ ನದಿಗೆ ಅಡ್ಡಲಾಗಿ ಹೊಸಹಳ್ಳಿ ಬಳಿ ನಿರ್ಮಿಸಿರುವ ಬ್ಯಾರೇಜ್ ನಿಂದ ಗೂಳ್ಯ, ಅಬ್ಬಿನಹೊಳೆ ಮತ್ತು ಈಶ್ವರಗೆರೆ ಕೆರೆಗೆ ನೀರು ತುಂಬಿಸಲು ಪೈಪ್ ಲೈನ್ ಮಾಡಲಾಗಿದ್ದು, ಕಳಪೆ ಇಲ್ಲವೆ ಪ್ಲಾಸ್ಟಿಕ್ ಪೈಪ್ ಬಳಸಿದ ಕಾರಣ ನೀರೆತ್ತಿದ ಒಂದೆರಡು ದಿನದಲ್ಲಿ ಕಿತ್ತುಕೊಂಡೋಗಿ, ತೊರೆಯ ಹೆಚ್ಚುವರಿ ನೀರು ಸದ್ಬಳಕೆ ಆಗದೆ ಪೋಲಾಗುತ್ತಿದೆ ಗೂಳ್ಯ ಗ್ರಾಮದ ಮುಖಂಡರಾದ ಜಿ.ಟಿ.ಜಯರಾಮಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಧರ್ಮಪುರ ಕೆರೆಗೆ ಕಬ್ಬಿಣದ ರಿಂಗನ್ನು ಬಳಸಿರುವುದರಿಂದ ಈ ಸಮಸ್ಯೆ ಕಾಣಿಸಿಲ್ಲ. ಹಾಗಾಗಿ ಪ್ಲಾಸ್ಟಿಕ್ ಪೈಪ್ ಲೈನ್ ಕಿತ್ತಾಕಿ ಪ್ರಷರ್ ತಡೆಯುವಂತ ಕಬ್ಬಿಣದ ಲೈನ್ ಮಾಡಿಸಿದಲ್ಲಿ ಕೆರೆಗೆ ನೀರು ದೊರೆಯುತ್ತದೆ. ಇಲ್ಲಿಯವರೆಗೂ ನಾಲ್ಕು- ಐದು ಬಾರಿ ಒಡೆದ ಪೈಪ್ ಅನ್ನು ಸರಿಪಡಿಸಿದರೂ ಸಮಸ್ಯೆ ಬಗೆಹರಿಯದ ಕಾರಣ ಬತ್ತಿದ ಕೆರೆಗೆ ನೀರು ಉಣಿಸಲು ಶೀಘ್ರ ಪರ್ಯಾಯ ಮಾರ್ಗದಲ್ಲಿ ಕೆರೆ ತುಂಬಿಸಬೇಕು,
ಕೇವಲ ಕೆಲವು ದಿನಗಳು ಮಾತ್ರ ತೊರೆ ಹರಿಯುವ ಅವಕಾಶವಿದ್ದು, ತ್ವರಿತವಾಗಿ ಗೂಳ್ಯ, ಅಬ್ಬಿನಹೊಳೆ ಮತ್ತು ಈಶ್ವರಗೆರೆ ಕೆರೆಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು ಎಂಬುದಾಗಿ ಗೂಳ್ಯ ಗ್ರಾಮದ ಜಿ.ಟಿ.ಜಯರಾಮಪ್ಪ ಅವರು ಸರ್ಕಾರ ಹಾಗೂ ಕ್ಷೇತ್ರದ ಸಚಿವರಾದ ಡಿ.ಸುಧಾಕರ್ ರವರಲ್ಲಿ ಮನವಿ ಮಾಡಿದ್ದಾರೆ.
