

ಹಿರಿಯೂರು :
ನಗರದಲ್ಲಿ ದಸರಾ ನವರಾತ್ರಿಯ ಆಯುಧಪೂಜೆ ಹಬ್ಬಕ್ಕಾಗಿ ಈಗಾಗಲೇ ಲೋಡುಗಟ್ಟಲೆ ಬೂದು ಕುಂಬಳಕಾಯಿ ಬಂದಿದ್ದು, ನಗರದ ಎಲ್ಲೆಲ್ಲೂ ಕುಂಬಳಕಾಯಿ ವ್ಯಾಪಾರಿಗಳದ್ದೇ ದರ್ಬಾರ್. ನಗರದ ನೆಹರೂ ಮಾರುಕಟ್ಟೆ ಆವರಣ, ಗಾಂಧಿಸರ್ಕಲ್, ಖಾಸಗಿಬಸ್ ಸ್ಟ್ಯಾಂಡ್, ನೆಹರೂ ಸರ್ಕಲ್, ಹುಳಿಯಾರು ರಸ್ತೆ, ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್, ಗುರುಭವನದ ಮುಂಭಾಗ ಸೇರಿದಂತೆ ಎಲ್ಲೆಲ್ಲೂ ಪುಟ್ ಪಾತ್ ತುಂಬೆಲ್ಲಾ ವ್ಯಾಪಾರಕ್ಕಾಗಿ ರಾಶಿರಾಶಿ ಬೂದುಕುಂಬಳಕಾಯಿಯನ್ನು ತಂದು ಸುರಿಯಲಾಗಿದೆ.

ಗೌರಿ-ಗಣೇಶ ಹಬ್ಬ ಮುಗಿದ ನಂತರ ಪಾತಾಳಕ್ಕೆ ಕುಸಿದಿದ್ದ ಹೂವಿನ ಬೆಲೆ ಈಗ ಚೇತರಿಸಿಕೊಂಡು ಹೂವಿನ ಬೆಲೆ ಗಗನಕ್ಕೆ ಏರಿಕೆಯಾಗುತ್ತಿದೆ. ದಸರಾ ಹಬ್ಬ ಇನ್ನು ಒಂದು ದಿನ ಇರುವಾಗಲೇ ನಗರದಲ್ಲಿ ಹೂವು, ಹಣ್ಣು, ತರಕಾರಿಗಳು ಬಾಳೆಕಂಬ, ಪೂಜಾಸಾಮಾಗ್ರಿಗಳ, ಬೆಲೆ ಸಾರ್ವಜನಿಕರಿಗೆ ದುಬಾರಿಯಾಗಿ ಏರಿಕೆಯಾಗಿದ್ದರೂ ನಗರದ ನಾಗರೀಕರಲ್ಲಿ ಹಬ್ಬದ ಸಡಗರಸಂಭ್ರಮ ಕಡಿಮೆಯಾಗಿಲ್ಲ, ನಗರದಲ್ಲಿ ಹಬ್ಬದ ಸಾಮಾಗ್ರಿಗಳನ್ನು ಕೊಳ್ಳಲು ಮುಗಿಬಿದ್ದಿರುವ ದೃಶ್ಯ ಸರ್ವೇಸಾಮಾನ್ಯವಾಗಿತ್ತು. ಈ ನವರಾತ್ರಿಯ ಆಯುಧ ಪೂಜೆ ಹಬ್ಬದಲ್ಲಿ ಜನರು ತಮ್ಮ ವಾಹನಗಳು ಆಯುಧಗಳು, ನಿತ್ಯಬಳಕೆಯ ಉಪಕರಣಗಳು ಸೇರಿದಂತೆ ಅಂಗಡಿಮುಂಗಟ್ಟುಗಳನ್ನು ತಳಿರು ತೋರಣಗಳಿಂದ ಹಾಗೂ ಬಾಳೆಕಂದುಗಳಿಂದ ಅಲಂಕರಿಸಿ, ಲಕ್ಷ್ಮೀ, ಸರಸ್ವತಿ, ಗಣಪತಿಗೆ ಪೂಜೆ ಸಲ್ಲಿಸಿದ ನಂತರ ಕುಂಬಳಕಾಯಿಗೆ ಕುಂಕುಮ ತುಂಬಿ ಅಂಗಡಿಗಳ ಮುಂದೆ ಹಾಗೂ ವಾಹನಗಳ ಮುಂದೆ ಒಡೆಯುವುದು ಒಂದು ಸಂಪ್ರದಾಯವಾಗಿದ್ದು, ಈ ದಸರಾ ಹಬ್ಬದಲ್ಲಿ ಬೂದುಕುಂಬಳಕಾಯಿ ಜನರ ಬೇಡಿಕೆಯ ಮುಖ್ಯವಸ್ತುವಾಗಿದೆ.
