
ಬೆಂಗಳೂರು :
ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪುತ್ರಿ ಐಶ್ವರ್ಯರವರು ಶುಕ್ರವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ, ಅಮರ್ತ್ಯ ಹೆಗ್ಡೆ ಹಾಗೂ ಐಶ್ವರ್ಯ ಹೆಗ್ಡೆ ದಂಪತಿಗಳಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕುಟುಂಬದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಈ ಶುಭ ಸುದ್ದಿಯಿಂದ ಶುಕ್ರವಾರದಂದು ಮಹಾಲಕ್ಷ್ಮಿ ಆಗಮನವಾಗಿದೆ ಎಂದು ಡಿ.ಕೆ.ಶಿವಕುಮಾರ್ ಅಭಿಮಾನಿಗಳು ಹಾಗೂ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ, ಲಕ್ಷ್ಮಿ ಆಗಮನ ಶುಕ್ರವಾರದ ಶುಭ ದಿನದಂದೇ ಐಶ್ವರ್ಯ ಅವರಿಗೆ ಅವರಿಗೆ ಹೆಣ್ಣು ಮಗು ಜನಿಸಿರುವುದು ಕುಟುಂಬಸ್ಥರಿಗೆ ಅತ್ಯಂತ ಸಂತಸವನ್ನು ತಂದಿದೆ.
ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ಸಿದ್ದಾರ್ಥ್ ಹೆಗಡೆ ಅವರ ಪುತ್ರ ಅಮರ್ತ್ಯ ಹೆಗ್ಡೆ ಮತ್ತು ಡಿ.ಕೆ.ಶಿವಕುಮಾರ್ ರವರ ಪುತ್ರಿ ಐಶ್ವರ್ಯ ಹೆಗ್ಡೆರವರು 2021ರಲ್ಲಿ ವಿವಾಹವಾಗಿದ್ದರು. ಇದೀಗ ಪುತ್ರಿ ಐಶ್ವರ್ಯರವರಿಗೆ ಹೆಣ್ಣು ಮಗು ಜನಿಸಿದ್ದು, ಮೊದಲ ಬಾರಿಗೆ ತಾತನಾಗಿ ಬಡ್ತಿ ಪಡೆದಿರುವ ಡಿ.ಕೆ.ಶಿವಕುಮಾರ್ ರವರು ಮೊಮ್ಮಗಳನ್ನು ಎತ್ತಿಕೊಂಡು ಸಂಭ್ರಮಿಸಿದ್ದಾರೆ.
ಶಿವಕುಮಾರ್ ಅವರ ಅಭಿಮಾನಿಗಳು ಮತ್ತು ರಾಜಕೀಯ ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಡಿ.ಕೆ.ಶಿವಕುಮಾರ್ ಹಾಗೂ ಅಮರ್ತ್ಯ ಮತ್ತು ಐಶ್ವರ್ಯ ದಂಪತಿಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಸದಾ ರಾಜಕೀಯ ಒತ್ತಡದಲ್ಲಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಈಗ ಮೊಮ್ಮಗಳ ಜೊತೆ ಸಮಯ ಕಳೆಯುವ ಸುಂದರ ಅವಕಾಶ ಒದಗಿಬಂದಿದೆ.
