
ಹಿರಿಯೂರು :
ಕೇವಲ ಅಂಕಗಳ ಗಳಿಸುವ ಶಿಕ್ಷಣಕ್ಕಿಂತ, ಬದುಕಿಗೆ ಮಾದರಿಯಾಗುವ ಶಿಕ್ಷಣ ಪ್ರಸ್ತುತ ವಿದ್ಯಾರ್ಥಿಗಳಿಗೆ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆಯಬೇಕು ಎಂಬುದಾಗಿ ಕ್ಷೇತ್ರ ಸಮನ್ವಯಾಧಿಕಾರಿ ಆರ್.ಟಿ.ಎ ಶ್ರೀನಿವಾಸ್ ಹೇಳಿದರು.
ನಗರದ ರಾಷ್ಟ್ರೀಯ ಹೆದ್ದಾರಿ 48ರಲ್ಲಿರುವ ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರದಂದು ಹಮ್ಮಿಕೊಳ್ಳಲಾಗಿದ್ದ ಪ್ರಥಮ ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಹಾಗೂ ವಿದ್ಯಾರ್ಥಿ ಸಂಘ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರು ಎಲ್ಲಾ ವಿಷಯಗಳನ್ನು ಬೋಧಿಸುತ್ತಿದ್ದರು, ಬೋಧನೆ ಜೊತೆಗೆ ಊರಲ್ಲಿನ ಸಣ್ಣಪುಟ್ಟ ವ್ಯಾಜ್ಯಗಳನ್ನು ಬಗೆಹರಿಸುತ್ತಿದ್ದರು. ಅಕ್ಷರವಂತರ ಬಗ್ಗೆ ಸಮಾಜದಲ್ಲಿ ಅಪಾರವಾದ ಗೌರವ ಎದ್ದು ಕಾಣುತ್ತಿತ್ತು, ಸಮಾಜಕ್ಕೆ ಶಿಕ್ಷಕರು ಮಾದರಿಯಾಗಿದ್ದರು ಎಂದರಲ್ಲದೆ,

ಬಿಇಡಿ ವ್ಯಾಸಂಗಕ್ಕೆ ಬಂದಿರುವವರು ಅಂಕ ಗಳಿಕೆಯ ಜೊತೆಗೆ ಬದುಕಿನ ಮೌಲ್ಯಗಳ ಬಗ್ಗೆ ಹೆಚ್ಚು ಗಮನ ಇಡಬೇಕು, ಪರಿಸರ ಸಂರಕ್ಷಣೆ ಮೌಲ್ಯ ನಿವಾರಣೆ ನೆಲ-ಜಲ ಸಂರಕ್ಷಣೆಯಂತಹ ಸಾಮಾಜಿಕ ಹೊಣೆಗಾರಿಕೆ ವಿದ್ಯಾರ್ಥಿಗಳಿಗೆ ಮಾದರಿಯಾಗುವಂತಹ ನಡೆ-ನುಡಿ ಹೊಂದಿರಬೇಕು ಎಂಬುದಾಗಿ ಅವರು ಸಲಹೆ ನೀಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಆರ್.ಪುಷ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಘಟಕದ ನೋಡಲು ಅಧಿಕಾರಿ ಎಂ.ಬಸವರಾಜ್ ಮಾತನಾಡಿದರು. ಸಂಸ್ಥೆಯ ವ್ಯವಸ್ಥಾಪಕರರಾದ ಕೆ.ದೋರೇಶ್, ಕಾರ್ಯದರ್ಶಿ ಬಿ.ಅವಿನಾಶ್, ಉಪನ್ಯಾಸಕರಾದ ಜೆ.ಆರ್.ನಾಗೇಶ್, ರವಿಕುಮಾರ್, ಎಸ್.ನಿಂಗರಾಜ್, ಶಮಿನಾಜ್ ಬಾನು, ಅಪ್ಸನಾ ಉಪಸ್ಥಿತರಿದ್ದರು.
