April 11, 2026
003

ಹಿರಿಯೂರು :

ವಾಣಿ ಸಕ್ಕರೆ ಪ್ರಥಮ ದರ್ಜೆ ಕಾಲೇಜು ಹಾಗೂ ಜಿಲ್ಲೆಯ ವಿವಿಧ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದ ತಿಮ್ಮನಹಳ್ಳಿ ಜಿ.ರಾಜುರವರು ಇದೀಗ ವಯೋನಿವೃತ್ತಿ ಹೊಂದಿದ್ದು, ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂಬುದಾಗಿ ಪ್ರೊ.ಮೈಸೂರುಶಿವಣ್ಣ ಶುಭಹಾರೈಸಿದರು.

ನಗರದ ವಾಣಿ ಸಕ್ಕರೆ ಪ್ರಥಮ ದರ್ಜೆ ಕಾಲೇಜು ಹಾಗೂ ಜಿಲ್ಲೆಯ ವಿವಿಧ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡಿ ವಯೋನಿವೃತ್ತಿ ಹೊಂದಿದ ತಿಮ್ಮನಹಳ್ಳಿ ಜಿ.ರಾಜು ಅವರಿಗೆ ಸ್ನೇಹ ಬಳಗದಿಂದ ಆತ್ಮೀಯವಾಗಿ ಸನ್ಮಾನಿಸಿ, ಸಿಹಿ ತಿನ್ನಿಸಿ ಶುಭಹಾರೈಸಿ, ನಂತರ ಮಾತನಾಡಿದ ಅವರು ಒಂದು ವೃತ್ತಿ ಎಂದ ಮೇಲೆ ನಿವೃತ್ತಿ ಸಹಜ. ಅದನ್ನು ಮತ್ತೊಂದು ಪ್ರವೃತ್ತಿಯ ಕಡೆಗೆ ಕೊಂಡೊಯ್ದು ಜಿ.ರಾಜುರವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲಿ ಎಂದರು.

ಆತ್ಮೀಯ ಗೆಳೆಯರಾದ ಕುರುಬರಹಳ್ಳಿದೇವರಾಜ್ ರವರು ಮಾತನಾಡಿ, ಈ ವಾಣಿ ಕಾಲೇಜಿನಲ್ಲಿಯೇ ನಾವಿಬ್ಬರು ಜೊತೆಯಲ್ಲಿಯೇ ಉಪನ್ಯಾಸಕ ವೃತ್ತಿಯಲ್ಲಿ ಕೆಲಸ ಮಾಡಿದ್ದೇವೆ. ಶ್ರೀಯುತ ರಾಜುರವರು ಅತ್ಯಂತ ಸರಳ ಸಜ್ಜನಿಕೆಯ ಉತ್ತಮ ಸ್ನೇಹಜೀವಿಯಾಗಿದ್ದು, ಅವರ ಮುಂದಿನ ನಿವೃತ್ತಿ ಜೀವನವು ಆರೋಗ್ಯ, ಐಶ್ವರ್ಯ, ನೆಮ್ಮದಿಯಿಂದ ಕೂಡಿರಲಿ ಎಂದು ಶುಭಹಾರೈಸಿದರು.

ಪ್ರಾಂಶುಪಾಲರಾದ ವಸಂತ್ ಮಾತನಾಡಿ, ಜಿ.ರಾಜು ಅವರ ಸರಳತೆ, ಹೊಂದಾಣಿಕೆ, ಬೆರೆಯುವಿಕೆ, ಆತ್ಮೀಯತೆ ನಿವೃತ್ತಿಯ ನಂತರ ಸಮಾಜ ಸೇವೆ ಕಡೆಗೆ ತಿರುಗಲಿ ನಮ್ಮ ಮತ್ತು ರಾಜು ಸ್ನೇಹ 30 ವರ್ಷಗಳ ದೀರ್ಘಾವಧಿಯ ಸ್ನೇಹವಾಗಿದೆ ಎಂಬುದಾಗಿ ಹೇಳಿದರು.

ರೈನ್ ಟ್ರಸ್ಟ್ ಅಧ್ಯಕ್ಷರಾದ ಕಸವನಹಳ್ಳಿರಮೇಶ್ ಮಾತನಾಡಿ, ಜಿರಾಜು  ಅವರು ವೃತ್ತಿಯಿಂದ ನಿವೃತ್ತರಾಗಿದ್ದಾರೆ, ಮುಂದಿನ ದಿನಗಳನ್ನು ಕುಟುಂಬದವರೊಂದಿಗೆ, ಹಾಗೂ ಸಮಾಜದ ಜನರೊಂದಿಗೆ ಬೆರೆತು ಸಮಾಜ ಸೇವೆಮಾಡುವ ಮೂಲಕ ಜನರ ಕಷ್ಟ-ಸುಖಗಳಲ್ಲಿ ಬೆರೆಯುತ್ತಾ ನೆಮ್ಮದಿಯನ್ನು ಕಾಣಲಿ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಲಿ ಎಂಬುದಾಗಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾದ ಮಂಜುನಾಥ್ ಮಾಳಿಗೆ, ಬಬ್ಬೂರ್ ಕುಮಾರ್,  ಲತಾವಸಂತಕುಮಾರ್, ಹುಲಗಲಕುಂಟೆ ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆ ಶಶಿಕಲಾ, ಉಪಸ್ಥಿತರಿದ್ದು ಜಿ.ರಾಜು ದಂಪತಿಗಳಿಗೆ ಸಿಹಿತಿನಿಸಿ ಮುಂದಿನ ದಿನಗಳು ಆಯುರ್ ಆರೋಗ್ಯ ಐಶ್ವರ್ಯ ಪ್ರಾಪ್ತಿಯಾಗಲಿ ಎಂಬುದಾಗಿ ಶುಭಹಾರೈಸಿದರು.

About The Author

Leave a Reply

Your email address will not be published. Required fields are marked *