
ಹಿರಿಯೂರು:
ಬೇಸಿಗೆ ಬಿಸಿಲು ಹೆಚ್ಚಾಗಿರುವುದರಿಂದ ಪರಿವರ್ತಕಗಳು ಸುಟ್ಟಾಗ ಇಲಾಖೆ ಕೊಡುವ ವಿದ್ಯುತ್ ಪರಿವರ್ತಕಗಳು ಕಳಪೆಯಾಗಿವೆ. ಬೆಸ್ಕಾಂ ನೀಡುತ್ತಿರುವ ದುರಸ್ತಿಯಾದ ಪರಿವರ್ತಕಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಕೊಟ್ಟ ಒಂದೆರಡು ದಿನಗಳಲ್ಲಿ ಮತ್ತೆ ಮತ್ತೆ ಸುಟ್ಟುಹೋಗುತ್ತಿವೆ. ಇದರಿಂದ ರೈತರ ಬೆಳೆಗಳು ಒಣಗಿ ತೀವ್ರತರದ ನಷ್ಟವುಂಟಾಗುತ್ತಿದೆ ಎಂಬುದಾಗಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತೀಯ ಕಿಸಾನ್ ಸಂಘದ ಕಾರ್ಯದರ್ಶಿ ಮಂಜುನಾಥ್ ಕಾರ್ತಿಕೇನಹಳ್ಳಿ ಅವರು ಮಾತನಾಡಿ ಕಳಪೆ ಗುಣಮಟ್ಟದ ವಿದ್ಯುತ್ ನೀಡುತ್ತಿರುವವರ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕು.ಉತ್ತಮ ಗುಣಮಟ್ಟದ ಪರಿವರ್ತಕಗಳನ್ನು ರೈತರಿಗೆ ನೀಡಬೇಕು.ಬೇಸಿಗೆ ಮುಗಿಯುವ ತನಕ ಅಧಿಕಾರಿಗಳು ರೈತರಿಗೆ ಯಾವುದೇ ವಿಧವಾದ ವಿದ್ಯುತ್ ಸಮಸ್ಯೆಯಾಗದಂತೆ ಪೂರ್ಣ ಪ್ರಮಾಣದ ಜವಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂಬುದಾಗಿ ರೈತರು ಆಗ್ರಹ ಮಾಡಿದ್ದಾರೆ.
ಇದೇ ರೀತಿಯ ಸಮಸ್ಯೆಗಳು ತಲೆದೂರಿದಲ್ಲಿ ತಮ್ಮ ಇಲಾಖೆಯ ಮುಂದೆ ಧರಣಿ ಸತ್ಯಾಗ್ರಹದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂಬುದಾಗಿ ಅವರು ಎಚ್ಚರಿಸಿದರು.

ಬೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಅಶೋಕ್ ಹೆಗಡೆವಾರ್ ಅವರು ಇನ್ನು ಮುಂದೆ ಈ ರೀತಿಯ ಯಾವುದೇ ಲೋಪದೋಷಗಳು ಬರದಂತೆ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ರೈತರ ಹಿತ ಕಾಪಾಡಿಕೊಂಡು ಬರುವ ಜವಬ್ದಾರಿ ತಮ್ಮೆಲ್ಲರ ಹೊಣೆ ಎಂಬುದಾಗಿ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಅಧ್ಯಕ್ಷರಾದ ಗಡಾರಿಕೃಷ್ಣಪ್ಪ, ತಾಲ್ಲೂಕು ಕಾರ್ಯದರ್ಶಿ ಚಂದ್ರಗಿರಿದಿಂಡಾವರ, ಜಯಪ್ರಕಾಶ್ ಕೆ.ಕೆ.ಹಟ್ಟಿ, ಶಿವಕುಮಾರ್ ಬ್ಯಾಡರಹಳ್ಳಿ, ತಾಲ್ಲೂಕು ಯುವ ಘಟಕದ ಅಧ್ಯಕ್ಷರಾದ ಚೇತನ್ ಯಳನಾಡು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
