
ಹಿರಿಯೂರು :
ಶಿಕ್ಷಣ ಇಲಾಖೆ ಎಲ್.ಕೆ.ಜಿ.-ಯು.ಕೆ.ಜಿ. ನಡೆಸುವುದನ್ನು ನಿಲ್ಲಿಸಿ, ಅಂಗನವಾಡಿ ಕೇಂದ್ರಗಳಲ್ಲಿಯೇ ನಡೆಸಬೇಕು ಮತ್ತು ಅಗತ್ಯವಿರುವ ಬಜೆಟ್ ಕೊಡಬೇಕು. ಅಂಗನವಾಡಿ ನೌಕರರಿಗೆ ದ್ರೋಹ ಬಗೆದ 4 ಕಾರ್ಮಿಕ ಸಂಹಿತೆಗಳು ರದ್ದಾಗಬೇಕು ರಾಜ್ಯ ಅಂಗನವಾಡಿ ನೌಕರರ ಸಂಘದ ಗೌರವಾಧ್ಯಕ್ಷರಾದ ಅನುಸೂಯಮ್ಮ ಹೇಳಿದರು.
ಕರ್ನಾಟಕ ರಾಜ್ಯಅಂಗನವಾಡಿ ನೌಕರರ ಸಂಘದ ವತಿಯಿಂದ ಫೆಬ್ರವರಿ12ರಂದು ಅಂಗನವಾಡಿ ನೌಕರರ ಮುಷ್ಕರ ನಡೆಸುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮನವಿಪತ್ರವನ್ನು ಸಲ್ಲಿಸಿ, ನಂತರ ಅವರು ಮಾತನಾಡಿದರು.
ಶಾಸನಬದ್ಧ ಸವಲತ್ತುಗಳನ್ನು ನೀಡದ ಶ್ರಮ ಶಕ್ತಿ ನೀತಿ 2005 ಬೇಡವೇ ಬೇಡ. ಅಂಗನವಾಡಿ ನೌಕರರಿಗೂ ಸಹ ಮುಟ್ಟಿನರಜೆ ನೀಡಬೇಕು, 56 ಲಕ್ಷ ಸ್ಕೀಂ ಕಾರ್ಮಿಕರ ಸೇವಾಷರತ್ತುಗಳ ಸುಧಾರಣೆಗೆ ಪ್ರತ್ಯೇಕ ವೇತನ ಆಯೋಗ ರಚಿಸಿ ಐ.ಸಿ.ಡಿ.ಎಸ್.ಯೋಜನೆಯನ್ನು ಖಾಯಂ ಮಾಡಬೇಕು.
ಅಲ್ಲದೆ, ಖಾಯಂ ಮಾಡುವ ತನಕ ಪ್ರತ್ಯೇಕ ನಿರ್ದೇಶನಾಲಯವನ್ನು ರಚಿಸಬೇಕು, 2018 ಫಲಾನುಭವಿಗಳ ಘಟಕ ವೆಚ್ಚ ಹೆಚ್ಚಳ ಮಾಡಿಲ್ಲ, ಕೂಡಲೇ ಘಟಕ ವೆಚ್ಚ ಹೆಚ್ಚಳ ಮಾಡಬೇಕು ಮತ್ತು ಸ್ಥಳೀಯ ಆಹಾರ ಪದಾರ್ಥಗಳನ್ನು ನೀಡಬೇಕು. 2018ರಿಂದ ಅಂಗನವಾಡಿ ನೌಕರರಿಗೆ ಕೇಂದ್ರ ಸರ್ಕಾರ ವೇತನ ಹೆಚ್ಚಳ ಮಾಡಲಿಲ್ಲ.
ಇಂದಿಗೂ ಅಂಗನವಾಡಿ ಕಾರ್ಯಕರ್ತೆಗೆ 2700ರೂ, ಸಹಾಯಕಿಗೆ1350ರೂ ಗಳನ್ನು ಮಾತ್ರವೇ ನೀಡುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಕನಿಷ್ಠ ವೇತನವನ್ನಾದರೂ ಜಾರಿ ಮಾಡಬೇಕು. ಎಫ್.ಆರ್.ಎಸ್ ನ್ನು ರದ್ದು ಮಾಡಬೇಕು. ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ವೈಫೈ ವ್ಯವಸ್ಥೆ ನೀಡಬೇಕು.
ಅಂಗನವಾಡಿ ನೌಕರರನ್ನು ಚುನಾವಣಾ ಕೆಲಸಗಳಿಂದ ಬಿಡುಗಡೆಗೊಳಿಸಬೇಕು. ಚುನಾವಣಾಧಿಕಾರಗಳು ಅಂಗನವಾಡಿ ಕಾರ್ಯಕರ್ತರ ಮೇಲೆ ಶಿಸ್ತು ಕ್ರಮ ಜರುಗಿಸಬಾರದು.ಖಾಸಗಿ ವಿಚಾರಗಳಲ್ಲಿ ಅಂಗನವಾಡಿ ನೌಕರರ ಬಂಧನವಾದಾಗ ವಿಚಾರಣೆ ನಡೆಸದೆ ಏಕಮುಖವಾಗಿ ಕೆಲಸದಿಂದ ವಜಾಮಾಡುವುದನ್ನು ನಿಲ್ಲಿಸಬೇಕು.
ಅಂಗನವಾಡಿ ನೌಕರರನ್ನು 3 ಮತ್ತು 4ನೇ ದರ್ಜೆಯ ನೌಕರರನ್ನಾಗಿ ಪರಿಗಣಿಸಬೇಕು. ಅಂಗನವಾಡಿ ನೌಕರರನ್ನು ಖಾಯಂ ಮಾಡುವ ತನಕ 26 ಸಾವಿರ ಕನಿಷ್ಠ ವೇತನ ಹೆಚ್ಚಿಸಬೇಕು.ಈ ಎಲ್ಲಾ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಕರೆಯ ಮೇರೆಗೆ ಇದೇ ಫೆಬ್ರವರಿ 12ರಂದು ಒಂದು ದಿನ ಕೆಲಸವನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದೇವೆ ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಗೌರವಾಧ್ಯಕ್ಷರಾದ ಅನುಸೂಯಮ್ಮ, ಅಧ್ಯಕ್ಷರಾದ ಬಿ.ಪಿ.ನಿರ್ಮಲ, ಉಪಾಧ್ಯಕ್ಷರಾದ ಜಯಮ್ಮ, ಖಜಾಂಚಿ ಎಸ್.ಕವಿತಾ, ಪ್ರಧಾನ ಕಾರ್ಯದರ್ಶಿ ಜೆ.ಕ್ರೀಸ್ಟ ಜುನೇಟಾ, ಎಸ್.ನೂರ್ ಜಾನ್, ಡಿ.ಹೇಮಲತಾ, ಸುವರ್ಣ, ಎಸ್.ಹೆಚ್.ಗಿರಿಜಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

