
ಹಿರಿಯೂರು:
ಹಸಿಕಸ, ಒಣಕಸ ಬೇರ್ಪಡಿಸಿ ನಗರಸಭೆಯ ವಾಹನಕ್ಕೆ ನೀಡಬೇಕು. ಪರಿಸರ ಸ್ವಚ್ಚತೆ ಕಾಪಾಡಬೇಕು ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ ಅವರು ಹೇಳಿದರು.
ಪಟ್ಟಣದ ವೇದಾವತಿ ನಗರದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ವಚ್ಚತೆ ಹಾಗೂ ಪರಿಸರದ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು,
ಶಾಲಾ ಆವರಣ, ತರಗತಿಗಳು ಮತ್ತು ತಮ್ಮ ಮನೆಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವ ಜವಬ್ದಾರಿ ಮಕ್ಕಳ ಮೇಲಿರುತ್ತದೆ. ಕಸವನ್ನು ಸರಿಯಾಗಿ ವಿಲೇವಾರಿ ಮಾಡುವುದು, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ಗಿಡಗಳನ್ನು ನೆಡುವುದು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಸ್ವಚ್ಚ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದರಲ್ಲದೆ,

ವಿದ್ಯಾರ್ಥಿಗಳು ಕೇವಲ ಪರಿಸರ ಸ್ವಚ್ಚತೆ ಮಾಡಿದರೆ ಸಾಲದು, ವಿದ್ಯಾರ್ಥಿಗಳು ವೈಯಕ್ತಿಕ ಸ್ವಚ್ಚತೆಗೆ ಆದ್ಯತೆ ನೀಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಸಮವಸ್ತ್ರ ಧರಿಸಬೇಕು ಮತ್ತು ಊಟಕ್ಕೂ ಮುನ್ನ ಕೈತೊಳೆಯುವುದನ್ನು ರೂಢಿಸಿಕೊಳ್ಳಬೇಕು ಎಂಬುದಾಗಿ ಅವರು ಹೇಳಿದರು.

ಶಾಲಾ ಪರಿಸರದ ತರಗತಿ, ಆವರಣ ಮತ್ತು ಶೌಚಾಲಯಗಳನ್ನು ಸ್ವಚ್ಚವಾಗಿಡುವುದು, ಕಸವನ್ನು ಡಸ್ಟ್ ಬಿನ್ ನಲ್ಲಿ ಹಾಕುವುದು. ಜಾಗೃತಿ ಮೂಡಿಸುವುದು, ಡಿ.ಜಿ.ಟಲ್ ಮಾಧ್ಯಮದ ಮೂಲಕ ಮಾಹಿತಿ ಹಂಚಿಕೊಳ್ಳುವುದು. ಪರಿಸರ ಸಂರಕ್ಷಣೆ ಗಿಡಗಳನ್ನು ನೆಡುವುದು ಮತ್ತು ಪೋಷಿಸುವುದು, ನೀರಿನ ಮಿತಬಳಕೆ ಮಾಡುವುದನ್ನು ಮಕ್ಕಳು ಶಾಲಾ ದಿನಗಳಲ್ಲಿಯೇ ಕಲಿಯಬೇಕು.

ತ್ಯಾಜ್ಯ ನಿರ್ವಹಣೆ ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸಿ ವಿಲೇವಾರಿ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಸ್ವಚ್ಚತೆಯನ್ನು ಒಂದು ಜೀವನ ಶೈಲಿಯನ್ನಾಗಿ ಅಳವಡಿಸಿಕೊಂಡಾಗ ಉತ್ತಮ ಆರೋಗ್ಯ ಮತ್ತು ಸುಸ್ಥಿರ ಪರಿಸರ ಸಾಧ್ಯವಾಗುತ್ತದೆ ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಕರಾದ ಅಶೋಕ್, ಮುರಾರ್ಜಿ ದೇಸಾಯಿ ವಸತಿ ಶಾಲೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
