
ಹಿರಿಯೂರು :
ನಮ್ಮ ರಾಜ್ಯದಲ್ಲಿ ಗೊಲ್ಲಸಮುದಾಯದ ಸುಮಾರು 70ಲಕ್ಷ ಕ್ಕೂ ಹೆಚ್ಚು ಜನರಿದ್ದು, ಗೊಲ್ಲ ಸಮುದಾಯವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ನಮ್ಮ ಸಮುದಾಯದ ಅಭಿವೃದ್ಧಿಯಾಗಬೇಕಾದರೆ ರಾಜ್ಯದ ಗೊಲ್ಲ ಸಮುದಾಯದ ವಿಧಾನಪರಿಷತ್ ಸದಸ್ಯರಾದ ಸನ್ಮಾನ್ಯ ಡಿ.ಟಿ.ಶ್ರೀನಿವಾಸ್ ರವರಿಗೆ ರಾಜ್ಯದ ಸಚಿವ ಸಂಪುಟದಲ್ಲಿ ಸ್ಥಾನ ಸಿಗಬೇಕು ಎಂಬುದಾಗಿ ತಾಲೂಕು ಗೊಲ್ಲ ಯಾದವ ಸಂಘದ ಅಧ್ಯಕ್ಷರಾದ ಆರ್.ರಂಗಸ್ವಾಮಿ ಹೇಳಿದರು.
ನಗರದ ವೇದಾವತಿ ಬಡಾವಣೆಯ ಶ್ರೀಕೃಷ್ಣ ದೇವಸ್ಥಾನದಲ್ಲಿ ರಾಜ್ಯದ ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಸದಸ್ಯರಾದ ಸನ್ಮಾನ್ಯ ಡಿ.ಟಿ.ಶ್ರೀನಿವಾಸ್ ರವರಿಗೆ ಸರ್ಕಾರ ರಾಜ್ಯದ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಗೊಲ್ಲ ಮುಖಂಡರುಗಳಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ತಿಪ್ಪೇಸ್ವಾಮಿ ಮಾತನಾಡಿ, ನಮ್ಮ ಜನಾಂಗದ 3 ಜನ ಪ್ರತಿನಿಧಿಗಳಿದ್ದರೂ ಸಚಿವ ಸಂಪುಟದಲ್ಲಿ ಸ್ಥಾನವನ್ನು ಕೊಟ್ಟಿಲ್ಲ. ರಾಜಕೀಯವಾಗಿ ಅತ್ಯಂತ ಹಿಂದುಳಿದಿರುವ ಗೊಲ್ಲಸಮಾಜಕ್ಕೆ ಈ ಬಾರಿ ಯಾವೊಬ್ಬ ಕ್ಯಾಬಿನೆಟ್ ಮಂತ್ರಿಯೂ ನಮ್ಮ ಸಮಾಜದವರು ಇಲ್ಲ. ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಮೊದಲಬಾರಿಗೆ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ಡಿ.ಟಿ.ಶ್ರೀನಿವಾಸ್ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ತೆಗೆದುಕೊಳ್ಳಲೇಬೇಕು ಎಂಬುದಾಗಿ ಕಾಂಗ್ರೆಸ್ ವರಿಷ್ಠರನ್ನು ಒತ್ತಾಯಿಸಿದರು.

ಕೌನ್ಸಿಲರ್ ಕರಿಯಪ್ಪ ಹಾಗೂ ಉಗ್ರಮೂರ್ತಿ ಮಾತನಾಡಿ, ನಮ್ಮ ಯಾದವ ಸಮುದಾಯವನ್ನು ಸರ್ಕಾರ ಕಡೆಗಣಿಸಿದ್ದು, ನಮ್ಮ ಸಮಾಜವನ್ನು ಪ್ರತಿನಿಧಿಸುವ ಪ್ರತಿನಿಧಿಗಳು ಸರ್ಕಾರದಲ್ಲಿಲ್ಲ. ಸರ್ಕಾರ ಗೊಲ್ಲ ಸಮುದಾಯದ ಜನಾನುರಾಗಿ ಹಾಗೂ ಜನಪ್ರಿಯ ನಾಯಕರಾದ ವಿಧಾನಪರಿಷತ್ ಸದಸ್ಯ ಸನ್ಮಾನ್ಯ ಡಿ.ಟಿ.ಶ್ರೀನಿವಾಸ್ ರವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ನಮ್ಮ ಗೊಲ್ಲ ಸಮುದಾಯದ ಪರವಾಗಿ ಒತ್ತಾಯಿಸುತ್ತಿದ್ದೇವೆ ಎಂಬುದಾಗಿ ಹೇಳಿದರು.
ಹಿರಿಯ ಮುಖಂಡರಾದ ಎ.ಜಿ.ತಿಮ್ಮಯ್ಯ ಮಾತನಾಡಿ, ನಮ್ಮ ಗೊಲ್ಲ ಸಮಾಜದಲ್ಲಿ ಯಾವುದೇ ಒಗ್ಗಟ್ಟು, ಹೋರಾಟ ಇಲ್ಲದಿರುವುದು ಗೊಲ್ಲ ಸಮುದಾಯಕ್ಕೆ ರಾಜಕೀಯ ಪ್ರಾತಿನಿದ್ಯ ಸಿಗದಿರಲು ಮುಖ್ಯ ಕಾರಣವಾಗಿದ್ದು, ಸುಮಾರು 70 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದರೂ ಮಂತ್ರಿಮಂಡಲದಲ್ಲಿ ನಮ್ಮ ಗೊಲ್ಲ ಸಮುದಾಯಕ್ಕೆ ಯಾವುದೇ ಪ್ರಾತಿನಿಧ್ಯ ನೀಡದಿರುವುದು ನಿಜಕ್ಕೂ ವಿಷಾದನೀಯ ಸಂಗತಿಯಾಗಿದೆ ಎಂದರಲ್ಲದೆ,

ಸಮಾಜದಲ್ಲಿ ಎಲ್ಲಾ ರೀತಿಯಿಂದಲೂ ಹಿಂದುಳಿದ ಹಾಗೂ ತುಳಿತಕ್ಕೊಳಗಾಗಿರುವ ನಮ್ಮ ಗೊಲ್ಲ ಸಮಾಜಕ್ಕೆ ಅರ್ಹತೆಯುಳ್ಳ ಹಾಗೂ ಸಂಘಟನಾ ಚತುರರಾದ ಡಿ.ಟಿ.ಶ್ರೀನಿವಾಸ್ ರವರಂತಹ ಜನಪ್ರಿಯ ಯುವನಾಯಕರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವ ಮೂಲಕ ಸರ್ಕಾರ ಗೊಲ್ಲ ಸಮುದಾಯದ ಅಭಿವೃದ್ಧಿಗೆ ಕೈಜೋಡಿಸಬೇಕು, ಅವರಿಗೆ ಸಚಿವಸಂಪುಟದಲ್ಲಿ ಸೂಕ್ತವಾದ ಸ್ಥಾನಮಾನವನ್ನು ಕಲ್ಪಿಸಬೇಕು ಎಂಬುದಾಗಿ ಅವರು ಒತ್ತಾಯಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಗೊಲ್ಲ ಯಾದವ ಸಂಘದ ಅಧ್ಯಕ್ಷರಾದ ಆರ್.ರಂಗಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಬಿ.ಕೆ. ಉಗ್ರಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷರಾದ ಬಿ.ಕೆ.ಕರಿಯಪ್ಪ, ತಾಲೂಕು ಯಾದವ ನೌಕರ ಸಂಘದ ಅಧ್ಯಕ್ಷರು ಹಾಗೂ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಎಚ್.ತಿಪ್ಪೇಸ್ವಾಮಿ, ಹಿರಿಯ ಮುಖಂಡರಾದ ಎ.ಜಿ.ತಿಮ್ಮಯ್ಯ, ಮುಖಂಡರಾದ ಮದ್ದನಕುಂಟೆ ನಾಗಪ್ಪ, ನಿ.ಉಪನ್ಯಾಸಕರಾದ ಕೆ.ನಾಗಣ್ಣ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ತಿಪ್ಪೇಸ್ವಾಮಿ, ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಎಂ ಸಿ ಚಿಕ್ಕಣ್ಣ, ಡಾಬಾ ಚಿಕ್ಕಣ್ಣ, ಆರ್.ಪಾಂಡುರಂಗ, ಪಿ.ಕೃಷ್ಣಮೂರ್ತಿ, ಬಂಗಾರಪ್ಪ, ಮಹಾಲಿಂಗಪ್ಪ, ಪುಟ್ಟಣ್ಣ, ಎ.ಕೃಷ್ಣಮೂರ್ತಿ, ರಾಮಕೃಷ್ಣಪ್ಪ, ರಾಮಣ್ಣ, ರಂಗನಾಥ್, ವಿಜಯ್ ಕುಮಾರ್, ಸುರೇಶ್, ಚಿತ್ತಪ್ಪ, ಶಕುಂತಲಮ್ಮ, ಪ್ರಹಲ್ಲಾದ್, ನಿರಂಜನ್, ರಾಘವೇಂದ್ರ, ರಘು ವೆಂಕಟೇಶ್, ಮುರಳಿ, ಶಿವಣ್ಣ, ಬಾಲಣ್ಣ, ಜೆ. ವೀರಣ್ಣ ವಿಜಯ್ ಯಾದವ್, ಮಂಜುನಾಥ್, ಕೃಷ್ಣಪ್ಪ, ಡಿ.ದಾಸಪ್ಪ, ಪಾಂಡುರಂಗಪ್ಪ, ರಾಮಣ್ಣ ಮುಂತಾದವರು ಉಪಸ್ಥಿತರಿದ್ದರು.
