
ಹಿರಿಯೂರು:
ನಗರಸಭೆ ವ್ಯಾಪ್ತಿಯಲ್ಲಿ ಬೀದಿ ಬದಿಯಲ್ಲಿ ಹಣ್ಣು-ತರಕಾರಿ ಇತ್ಯಾದಿ ವ್ಯಾಪಾರ ಮಾಡುವ ಮೂಲಕ ಜೀವನ ಸಾಗಿಸುತ್ತಿರುವ ಬಡವರ ವ್ಯಾಪಾರಕ್ಕೆ ಅಧಿಕಾರಿಗಳು ತೊಂದರೆ ಕೊಟ್ಟರೆ ಹೋರಾಟ ನಡೆಸಬೇಕಾಗುತ್ತದೆ ಎಂಬುದಾಗಿ ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ ಸಂಸ್ಥಾಪಕರಾದ ಕೆ.ರಾಮಚಂದ್ರಪ್ಪ ಅವರು ಎಚ್ಚರಿಸಿದರು.
ನಗರದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಸಮಿತಿಯ ತಾಲ್ಲೂಕು ಶಾಖೆ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಬೀದಿಬದಿ ವ್ಯಾಪಾರಿಗಳ ನಾಮಫಲಕ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಮುಖ ರಸ್ತೆಗಳಲ್ಲಿರುವ ಅಂಗಡಿ, ಮಳಿಗೆಗಳ ಬಾಡಿಗೆ ದರ ಕೇಳಿದರೆ ಬಡವರ ಜೀವ ಕೈಗೆ ಬರುತ್ತದೆ. ಅಷ್ಟೊಂದು ಹಣ ಕೊಟ್ಟು ವ್ಯಾಪಾರ ಮಾಡುವ ಶಕ್ತಿ ಇಲ್ಲದವರು ಮಳೆ-ಬಿಸಿಲು-ಚಳಿ ಎನ್ನದೆ ಅಂದಂದಿನ ಖರ್ಚಿಗೆ ಬೇಕಿರುವ ಹಣವನ್ನು ಸಂಪಾದಿಸಿಕೊಳ್ಳುತ್ತಾರೆ.

ನಗರಸಭೆಯವರು ಸಾಧ್ಯವಾದರೆ ಇಂತಹ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್ ಸಾಲ ಕೊಡಿಸಬೇಕು. ನಗರಸಭೆಯ ವಿವಿಧ ಯೋಜನೆಗಳಡಿ ಸಾಧ್ಯವಿರುವ ಆರ್ಥಿಕ ನೆರವು ನೀಡಬೇಕು ಎಂಬುದಾಗಿ ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ನರಸಿಂಹಸ್ವಾಮಿ, ಆರ್.ಶಿವರಾಜ್ ಕುಮಾರ್, ಸಾಧಿಕ್ ಸೀಮೆಎಣ್ಣೆ, ಲಕ್ಷ್ಮಣ್ ರಾವ್, ಕೆಂಚಪ್ಪ, ಸಿ.ಮಲ್ಲೇಶ್, ಕೆ.ಓಂಕಾರಮೂರ್ತಿ, ದೇವರಾಜ್, ಎಸ್.ಕೆ.ದಾಸಣ್ಣ, ಸೂರಗೊಂಡನಹಳ್ಳಿ ತಿಪ್ಪೇಸ್ವಾಮಿ, ಹರ್ತಿಕೋಟೆ ಅಶೋಕ್, ಟಿ.ರಾಘವೇಂದ್ರ, ಷರೀಫ್, ನಯಾಜ್, ದಾದಾಪೀರ್, ಜಯಣ್ಣ, ಶಿವಮ್ಮ, ಮಹಂತಮ್ಮ, ಬಸಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

