
ಹಿರಿಯೂರು:
ಜಿಲ್ಲೆಯ ಜೀವನಾಡಿಯಾಗಿರುವ ವಾಣಿವಿಲಾಸ ಸಾಗರ ಜಲಾಶಯವು 4ನೇ ಬಾರಿಗೆ ಕೋಡಿ ಬಿದ್ದು, ಹರಿಯುತ್ತಿದೆ. ಜನರು ಸೋಮವಾರ ಬೆಳಗಿನಿಂದಲೇ ತಂಡೋಪತಂಡವಾಗಿ ಬಂದು ವೀಕ್ಷಿಸಿ, ಕೋಡಿ ಹರಿಯುತ್ತಿರುವುದನ್ನು ಕಣ್ತುಂಬಿಕೊಂಡು ಸಂಭ್ರಮಿಸುತ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆ ಸೇರಿದಂತೆ ನಾನಾ ಕಡೆಗಳಿಂದ ಯುವಕರು, ಹಿರಿಯರು, ಮಕ್ಕಳು, ಮಹಿಳೆಯರು ಡ್ಯಾಂಗೆ ಭೇಟಿ ಕೊಡುತ್ತಿದ್ದಾರೆ. ಹಾರನಕಣಿವೆ ಸಮೀಪದ ಹಿರಿಯೂರು- ಹೊಸದುರ್ಗ ರಸ್ತೆಯಲ್ಲಿ ನೀರು ನದಿಯಂತೆ ಹರಿಯುತ್ತಿರುವ ದೃಶ್ಯವನ್ನು ಪೋಟೋ ತೆಗೆಯುತ್ತಾ ಸಂಭ್ರಮಿಸುತ್ತಿದ್ದಾರೆ.

ಇತಿಹಾಸದಲ್ಲಿ 4ನೇ ಬಾರಿಗೆ ಭಾನುವಾರ ಕೋಡಿ ಬಿದ್ದಿದ್ದು, ಅಂದು ಒಳಹರಿವು ಕೇವಲ 1945 ಕ್ಯೂಸೆಕ್ ಮಾತ್ರ ಇತ್ತು. ಹೊರಹರಿವು ಇರಲಿಲ್ಲ. ಆದರೆ ಸೋಮವಾರ ಬೆಳಗ್ಗೆ ಡ್ಯಾಂ ಮೇಲ್ಬಾಗದಲ್ಲಿ ಸುರಿದ ಮಳೆಯಿಂದ ಒಳಹರಿವು ಪ್ರಮಾಣ ಹೆಚ್ಚಾಗಿದ್ದು, ಇದರಿಂದ ಸುಮಾರು 914 ಕ್ಯೂಸೆಕ್ ಪ್ರಮಾಣದಲ್ಲಿ ನೀರು ವೇದಾವತಿ ನದಿ ಮೂಲಕ ಹರಿಯುತ್ತಿದೆ.
ಜಲಾಶಯದ ನೀರು ಹಿರಿಯೂರು ಹೊಸದುರ್ಗ ರಸ್ತೆಯಲ್ಲಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಎರಡು ಕಡೆಯಲ್ಲಿ ಜೆ.ಸಿ.ಬಿ.ಯಿಂದ ಟ್ರಂಚ್ ಹೊಡೆಸಿದ್ದು, ಸಂಚಾರ ಸಂಪೂರ್ಣ ಬಂದ್ ಆಗಿದೆ. ಇದರಿಂದ ಭರಮಗಿರಿ-ಲಕ್ಕಿಹಳ್ಳಿ ಬೈಪಾಸ್ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ.

