
ಹಿರಿಯೂರು:
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಳು ಬಡವರಿಗೆ ಸಿಗದೇ ಮರೀಚಿಕೆಯಾಗಿದೆ, ಇದೇ ಸರ್ಕಾರಿ ಆಸ್ಪತ್ರೆ ವೈದ್ಯರುಗಳು ಖಾಸಗಿ ಆಸ್ಪತ್ರೆಗಳಲ್ಲಿ ಯಾವಾಗಲೋ ಸಿಗುತ್ತಾರೆ ಎಂಬುದಾಗಿ ಸಾಮಾಜಿಕ ಕಾರ್ಯಕರ್ತರು ಹಾಗೂ ರೈನ್ ಟ್ರಸ್ಟ್ ಅಧ್ಯಕ್ಷರಾದ ಕಸವನಹಳ್ಳಿರಮೇಶ್ ಅವರು ಆರೋಪಿಸಿದರು.
ನಗರದ ಸರ್ಕಾರಿ ಆಸ್ಪತ್ರೆ ಮುಂಭಾಗ ಅಕ್ಟೋಬರ್ 18ರಂದು ಬೆಳಗ್ಗೆ 10.30ಕ್ಕೆ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿ ಅವರು ಮಾತನಾಡಿದರು.
ಸುಮಾರು 3ಲಕ್ಷಕ್ಕೂ ಹೆಚ್ಚು ಸಂಬಳ ಪಡೆಯುವ ಸರ್ಕಾರಿ ತಜ್ಞ ವೈದ್ಯರು ನಾಮಕಾವಸ್ತೆಗೆ ಸರ್ಕಾರಿ ಆಸ್ಪತ್ರೆಗೆ ಬಂದು ಹೆಚ್ಚಿನ ಸಮಯವನ್ನು ತಮ್ಮ ಖಾಸಗಿ ಕ್ಲಿನಿಕ್ ನಲ್ಲಿ ಹಣ ಮಾಡುವ ದಂದೆಗೆ ಇಳಿದಿದ್ದಾರೆ, ಇದರ ಬದಲಾಗಿ ಸರ್ಕಾರಿ ಆಸ್ಪತ್ರೆಯನ್ನು ಮುಚ್ಚುವುದೇ ಮೇಲು ಎಂಬುದಾಗಿ ಅವರು ಆಗ್ರಹಿಸಿದ್ದಾರೆ.
ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹೃದಯಾಘಾತದಂತಹ ತುರ್ತು ಸನ್ನಿವೇಶಗಳಲ್ಲಿ ಸರ್ಕಾರ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಹೆಸರಿನಲ್ಲಿ ಸುಮಾರು 40ರಿಂದ 50,000 ಬೆಲೆಬಾಳುವ ಟೆನೆಕ್ಟ ಪ್ಲಸ್ ಎನ್ನುವ ಇಂಜೆಕ್ಷನ್ ಅನ್ನು ಕೊಡಬೇಕೆಂದು ಸರ್ಕಾರದ ಯೋಜನೆ ಇದೆ,ಈ ಇಂಜೆಕ್ಷನ್ ನಿಂದ ಹೆಪ್ಪುಗಟ್ಟಿರುವ ರಕ್ತ ತೆಳುವಾಗಿ ರೋಗಿ ಹೆಚ್ಚಿನ ಚಿಕಿತ್ಸೆ ಪಡೆಯಲು ದೂರದೂರಿಗೆ ಪ್ರಯಾಣ ಮಾಡಲು ಅನುಕೂಲವಾಗಿ ಸಾವಿನಿಂದ ಪಾರಾಗುತ್ತಾನೆ ಎಂದರಲ್ಲದೆ,
ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಇದನ್ನು ಹೃದಯಾಘಾತದಂತಹ ಸನ್ನಿವೇಶಗಳಲ್ಲಿ ಬಳಸಬೇಕೆಂದರೆ ಇದಕ್ಕೆ ನುರಿತ ವೈದ್ಯರು, ಸಿಬ್ಬಂದಿ, ಹಾಗೂ ಐ.ಸಿ.ಯು ಸಲಕರಣೆಗಳು ಲಭ್ಯವಿಲ್ಲ ಎಂದು ಆಡಳಿತ ಅಧಿಕಾರಿ ಡಾ. ವಿಜಯಕುಮಾರ್ ಹೇಳುತ್ತಾರೆ. ಹಿರಿಯೂರು ತಾಲ್ಲೂಕು ಆಸ್ಪತ್ರೆಯಲ್ಲಿ ಐ.ಸಿ.ಯು ಇದೆ. 14 ರಿಂದ 15 ಜನ ವೈದ್ಯರಿದ್ದಾರೆ. ಸ್ಟಾಪ್ ನರ್ಸ್ ಇತರೆ ಸಿಬ್ಬಂದಿ ವರ್ಗದವರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ ಅಲ್ಲದೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ, ಹಾಗೂ ಜನನಿ ಸುರಕ್ಷಾ ಯೋಜನೆಯಲ್ಲಿ ಹಣ ಲಭ್ಯವಿದೆ.
ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡಲು ವೈದ್ಯರು ತಯಾರಿಲ್ಲ. ಅದೇ ತಮ್ಮ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಸಮಯವನ್ನು ಮೀಸಲಿಡುತ್ತಾರೆ. ಹಾಗಾದರೆ ಸರ್ಕಾರ ಇಂತಹ ಇಂಜೆಕ್ಷನ್ ಒದಗಿಸಿ, ಇನ್ನೊಂದು ಕಡೆ ಸೌಲಭ್ಯ ಒದಗಿಸದೆ ರೋಗಿಗಳಿಗೆ ಅನುಕೂಲವಾಗುತ್ತದೆ.
ಆದರೆ ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಎನ್ನುವಂತೆ ಇದನ್ನು ಬಳಸುವ ವ್ಯವಸ್ಥೆ ಇಲ್ಲದ ಮೇಲೆ ಈ ಯೋಜನೆಯನ್ನು ರದ್ದುಪಡಿಸಬೇಕು. ಹಾಗೂ ಇದೇ ಇಂಜೆಕ್ಷನ್ ಅನ್ನು ಹಿರಿಯೂರಿನ ಖಾಸಗಿ ವೈದ್ಯರ ಬಳಿ 50,000ಕ್ಕೂ ಹೆಚ್ಚು ಹಣ ಕೊಟ್ಟು ಜೀವ ಉಳಿಸಿಕೊಳ್ಳಬೇಕಾದ ಸನ್ನಿವೇಶ ಇದೆ.
ಅಲ್ಲದೆ, ವೈದ್ಯರ ಸುರಕ್ಷತಾ ಕಾಯ್ದೆಯನ್ನು ಗುರಾಣಿಯನ್ನಾಗಿ ಬಳಸಿಕೊಂಡು ಪ್ರಶ್ನೆ ಮಾಡುವವರನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಾರೆ. ತಮ್ಮ ಖಾಸಗಿ ಕ್ಲಿನಿಕ್ ನಲ್ಲಿ ಪ್ರತಿದಿನ ಸಾವಿರಾರು ರೂಪಾಯಿ ಗಳಿಕೆ ಆಗುವುದರಿಂದ ಸರ್ಕಾರಿ ಆಸ್ಪತ್ರೆ ಎನ್ನುವುದು ರೋಗಿಗಳನ್ನು ಸಂಪರ್ಕಿಸಿ, ತಮ್ಮ ಖಾಸಗಿ ಕ್ಲಿನಿಕ್ಕಿಗೆ ಸೆಳೆಯುವ ಒಂದು ಮಧ್ಯವರ್ತಿ ಕೇಂದ್ರವಾಗಿದೆ.
ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ಅಧ್ಯಕ್ಷರಾದ ಆಲೂರುಚೇತನ್ ಅವರು ಮಾತನಾಡಿ, ಸರ್ಕಾರಿ ವೈದ್ಯರು ಸಾರ್ವಜನಿಕರ ಆರೋಗ್ಯ ಕಾಪಾಡಬೇಕು. ಅದು ಬಿಟ್ಟು ಖಾಸಗಿ ಕ್ಲಿನಿಕ್ ನಲ್ಲಿ ಹಣ ಮಾಡುವ ದಂದೆ ಮಾಡುತ್ತಿದ್ದರೆ ಈ ಕೂಡಲೇ ತಮ್ಮ ಹುದ್ದೆಗೆ ರಾಜೀನಾಮೆ ಕೊಡಬೇಕು ಎಂದರಲ್ಲದೆ,
ಈ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರಾದ ಸುಧಾಕರ್ ಅವರು ತುರ್ತಾಗಿ ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹೃದಯಾಘಾತದಂತಹ ತುರ್ತು ಸನ್ನಿವೇಶಗಳಲ್ಲಿ ಸರ್ಕಾರ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಹೆಸರಿನಲ್ಲಿ ಸುಮಾರು 40ರಿಂದ 50,000 ಬೆಲೆಬಾಳುವ “ಟೆನೆಕ್ಟಪ್ಲಸ್” ಎನ್ನುವ ಇಂಜೆಕ್ಷನ್ ವ್ಯವಸ್ಥೆ ಮಾಡಿ ಕೊಡಬೇಕು ಎಂಬುದಾಗಿ ಅವರುಗಳು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಪೌರ ಸೇವಾ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ನಾರಾಯಣಾಚಾರ್, ಡಿ.ಸಿ.ಸಿ. ನಿರ್ದೇಶಕರಾದ ಮಂಜುನಾಥ್ ಮಾಳಿಗೆ, ಕಾತ್ರಿಕೆನಹಳ್ಳಿರಂಗನಾಥ್, ಕೆ.ಜಿ.ಹೆಚ್.ಗೌಡ, ಕೆ.ಕೆ.ಹಟ್ಟಿ ಜಯಪ್ರಕಾಶ್ ಸೇರಿದಂತೆ ಅನೇಕ ಪ್ರಗತಿಪರ ಚಿಂತಕರು, ಹೋರಾಟಗಾರರು ಉಪಸ್ಥಿತರಿದ್ದರು.

