
ಹಿರಿಯೂರು:
ತಾಲ್ಲೂಕಿನ ಜೀವನಾಡಿ ವಾಣಿವಿಲಾಸ ಸಾಗರ ಜಲಾಶಯ ಕಳೆದ ಎರಡು ಮೂರು ವರ್ಷಗಳಿಂದ ಸತತವಾಗಿ ಭರ್ತಿಯಾಗುತ್ತಿದ್ದು, ಭದ್ರಾ ಮೇಲ್ದಂಡೆ ಯೋಜನೆಯ ನೀರು ವಾಣಿವಿಲಾಸ ಸಾಗರ ಜಲಾಶಯಕ್ಕೆ ಹರಿದು ಬರುತ್ತಿದೆ. ಆದ್ದರಿಂದ ವಾಣಿಸಕ್ಕರೆ ಕಾರ್ಖಾನೆಯನ್ನು ಪುನರ್ ಆರಂಭಿಸುವ ಅವಶ್ಯಕತೆಯಿದೆ ಎಂಬುದಾಗಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷರಾದ ರಾಮಕೃಷ್ಣಪ್ಪ ಅವರು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಗರದಲ್ಲಿ ವಾಣಿಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆ (ಟಿ. ನಾರಾಯಣ ಗೌಡ ಬಣ) ಕಾರ್ಯಕರ್ತರು ಹಾಗೂ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇದರಿಂದ ನೂರಾರು ಯುವಕರಿಗೆ ಉದ್ಯೋಗ ದೊರೆಯಲಿದೆ. ವ್ಯಾಪಾರ ವಹಿವಾಟು ಅಧಿಕವಾಗಿ ಬಡತನ ನಿವಾರಣೆಯಾಗಿ ಆರ್ಥಿಕವಾಗಿ ತಾಲ್ಲೂಕು ಸಮೃದ್ಧಿಯನ್ನು ಗಳಿಸಬಹುದಾಗಿದೆ. ತಾಲ್ಲೂಕಿನಲ್ಲಿ ರೈತರು ಕಬ್ಬನ್ನು ಬೆಳೆಯಬಹುದಾಗಿದೆ. ಎಂದರಲ್ಲದೆ,
ಈ ಬಗ್ಗೆ ಸಂಬಂಧಪಟ್ಟ ಸಚಿವರ ಮತ್ತು ಸ್ಥಳೀಯ ಮಂತ್ರಿಗಳ ಮತ್ತು ಸರ್ಕಾರದ ಗಮನ ಸೆಳೆಯಲು ಕರವೇ ವತಿಯಿಂದ ಅಕ್ಟೋಬರ್ 18ರ ಶನಿವಾರ ಬೆಳಗ್ಗೆ 10 ಗಂಟೆಗೆ ಬೈಪಾಸ್ ರಸ್ತೆ ರಂಜಿತ್ ಸರ್ಕಲ್ ನಿಂದ ಗಾಂಧಿ ವೃತ್ತದವರೆಗೆ ಪ್ರತಿಭಟನೆ ನಡಸೋಣ ಎಂಬುದಾಗಿ ತಿಳಿಸಿದರು. ಎಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸಹಮತ ವ್ಯಕ್ತಪಡಿಸಿದರು.
ನಗರ ಘಟಕದ ಅಧ್ಯಕ್ಷರಾದ ಮಹಮ್ಮದ್ ಜಾಕೀರ್ ಮಾತನಾಡಿ ನಮ್ಮ ಈ ಹೋರಾಟ ತಾತ್ಕಾಲಿಕವಾಗಿ ಮಾಡದೆ ಸಕ್ಕರೆ ಕಾರ್ಖಾನೆ ಪುನರಾರಂಭವಾಗುವವರೆಗೂ ನಿರಂತರವಾಗಿ ಹೋರಾಟ ಮಾಡೋಣ ಎಂಬುದಾಗಿ ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗೋ.ಬಸವರಾಜು, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಡಿ.ಕೆ.ಎಸ್.ದಾದಾಪೀರ್, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಎಂ.ಕೆ.ಜಾಫರ್, ಹಾಗೂ ಗಿರೀಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

