
ಹಿರಿಯೂರು:
ನಗರದ ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆ ಹಾಗೂ ಅನೇಕ ದಾನಿಗಳ ಸಹಯೋಗದೊಂದಿಗೆ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉಚಿತ ಆಹಾರ ವಿತರಣೆ ಮಾಡುವ ಯೋಜನೆಯನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಎಂಬುದಾಗಿ ರೋಟರಿ ಕ್ಲಬ್ ಕಾರ್ಯದರ್ಶಿಗಳಾದ ವಿಕಾಸ್ ಡಿ. ಜೈನ್ ಅವರು ಹೇಳಿದರು.

ಕಳೆದ ಐದು ವರ್ಷಗಳಿಂದ ಈ ಮಹತ್ವದ ಸೇವಾ ಯೋಜನೆ ನಿರಂತರವಾಗಿ ನಡೆಯುತ್ತಿದ್ದು, ಈ ಯೋಜನೆಯ ಮೂಲಕ ಆಸ್ಪತ್ರೆಯ ರೋಗಿಗಳು ಹಾಗೂ ಅವರ ಪಾಲಕರಿಗೆ ಪೌಷ್ಠಿಕ ಆಹಾರವನ್ನು ಒದಗಿಸುತ್ತಿದ್ದು, ಈಯೋಜನೆಯಡಿ ವಾರದಲ್ಲಿ ಆರು ದಿನಗಳು ಉಚಿತ ಆಹಾರ ವಿತರಣೆ ನಡೆಯುತ್ತಿದ್ದು, ಅಗತ್ಯವಿರುವವರಿಗೆ ಸರಿಯಾದ ಸಮಯಕ್ಕೆ ಆರೋಗ್ಯಕರ ಆಹಾರ ಲಭ್ಯವಾಗುವಂತೆ ನೋಡಿಕೊಳ್ಳಲಾಗಿದೆ ಎಂದರಲ್ಲದೆ,

ಈ ದೀರ್ಘಕಾಲದ ಸೇವಾ ಯೋಜನೆಯು ನಮ್ಮ ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳ ಮಾನವೀಯತೆ ಹಾಗೂ ಬದ್ಧತೆಯ ಪ್ರತೀಕವಾಗಿದ್ದು, ಈ ಯೋಜನೆಯ ಮೂಲಕ ರೋಟರಿಯ ಧ್ಯೇಯವಾಕ್ಯವಾದ “ಸೇವೆಯೇಶ್ರೇಷ್ಠ”ಎಂಬ ಸಂದೇಶವನ್ನು ಮನುಕುಲಕ್ಕೆ ಸಾರುತ್ತಿದೆ ಎಂಬುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಎಂ.ಎಸ್.ರಾಘವೇಂದ್ರ, ಸೇರಿದಂತೆ ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆ ಸದಸ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

