
ಹಿರಿಯೂರು:
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನವಂಬರ್ 1 ರಂದು ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸುವ ಸಂಬಂಧ ಅಕ್ಟೋಬರ್ 18ರಂದು ಬೆಳಗ್ಗೆ 11 ಗಂಟೆಗೆ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಎಂಬುದಾಗಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರು ಹಾಗೂ ತಹಶೀಲ್ದಾರರಾದ ಸಿದ್ದೇಶ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕನ್ನಡ ರಾಜ್ಯೋತ್ಸವ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ಆಚರಿಸಬೇಕಾದ ಅತ್ಯಂತ ಮಹತ್ತರ ದಿನಾಚರಣೆಯಾಗಿದ್ದು, ಈ ಆಚರಣೆಯ ಕುರಿತು ಕರೆಯಲಾಗಿರುವ ಪೂರ್ವಭಾವಿ ಸಭೆಯಲ್ಲಿ ಅತಿ ಸೂಕ್ಷ್ಮ ಚರ್ಚೆಗಳ ಸಾಧ್ಯತೆ ಇರುತ್ತದೆ.
ಆದ್ದರಿಂದ ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ಕಚೇರಿಯ ಅಧೀನ ಸಿಬ್ಬಂದಿಗಳನ್ನು ನಿಯೋಜಿಸದೇ ಕಡ್ಡಾಯವಾಗಿ ನಿಗದಿತ ಸಮಯಕ್ಕೆ ತಪ್ಪದೇ ತಾವೇ ಸಭೆಗೆ ಹಾಜರಾಗುವ ಮೂಲಕ ಉತ್ತಮ ಸಲಹೆ ಸೂಚನೆಗಳನ್ನು ನೀಡಬೇಕು ಎಂಬುದಾಗಿ ಸೂಚನೆ ನೀಡಿದ್ದಾರೆ.
ಈ ಹಿಂದೆ ನಡೆದಂತಹ ನಾಡಹಬ್ಬಗಳು ಹಾಗೂ ರಾಷ್ಟ್ರೀಯಹಬ್ಬಗಳಿಗೆ ಪ್ರತಿಬಾರಿಯು ಜಯಂತಿಗಳಿಗೆ ಸಂಬಂಧಿಸಿದಂತೆ ಸಭಾ ಸೂಚನಾ ಪತ್ರ ನೀಡಿದ್ದರೂ ಸಹ ಜಯಂತಿ ಕಾರ್ಯಕ್ರಮಗಳಿಗೆ ಹಾಜರಾಗದೇ ಇರುವುದರಿಂದ ಆಯಾ ಸಮಾಜದ ಅಧ್ಯಕ್ಷರು, ದಲಿತ ಸಂಘಟನೆಗಳು, ಪತ್ರಿಕಾ ಮಾಧ್ಯಮದವರು ವಿಷಾದ ವ್ಯಕ್ತಪಡಿಸಿರುತ್ತಾರೆ.
ಆದ್ದರಿಂದ ಇನ್ನು ಮುಂದೆ ನಡೆಯುವ ಜಯಂತಿ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಹಾಜರಾಗಿ ಸಭೆಯನ್ನು ಯಶಸ್ವಿಗೊಳಿಸಿಕೊಡಬೇಕು, ತಪ್ಪಿದಲ್ಲಿ ಗೈರು ಹಾಜರಾಗುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಜರುಗಿಸುವಂತೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಅನಿವಾರ್ಯವಾಗಿ ಶಿಫಾರಸ್ಸು ಮಾಡಲಾಗುವುದು ಎಂದರಲ್ಲದೆ,
ಈ ಪೂರ್ವಭಾವಿ ಸಭೆಗೆ ತಾಲ್ಲೂಕಿನ ಚುನಾಯಿತ ಪ್ರತಿನಿಧಿಗಳು, ದಲಿತ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಕನ್ನಡಪರ ಸಂಘ-ಸಂಸ್ಥೆಯ ಪದಾಧಿಕಾರಿಗಳು, ಎಲ್ಲಾ ಸಮುದಾಯದ ಪ್ರಮುಖರು ಹಾಗೂ ಪತ್ರಿಕಾ ಮಾಧ್ಯಮ ಮಿತ್ರರು ಭಾಗವಹಿಸಿ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಯಶಸ್ವಿಗೊಳಿಸಲು ಅವರು ಮನವಿ ಮಾಡಿದ್ದಾರೆ.

