
ಹಿರಿಯೂರು:
ಪ್ರಸ್ತುತ ಜಿಲ್ಲೆಯಲ್ಲಿ ಹಸ್ತಾ ಮಳೆ ಆರ್ಭಟಿಸಿದ ಪರಿಣಾಮವಾಗಿ ವಾಣಿವಿಲಾಸ ಸಾಗರ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಅಕ್ಟೋಬರ್ 10 ರಂದು ಜಲಾಶಯಕ್ಕೆ 1250 ಕ್ಯೂಸೆಕ್ ನೀರು ಒಳಹರಿವು ಬಂದಿದ್ದರೆ, ಅಕ್ಟೋಬರ್ 11ರ ಶನಿವಾರ ಬೆಳಗ್ಗೆ ವೇಳೆಗೆ ಜಲಾಶಯಕ್ಕೆ ಒಳಹರಿವು ನೀರಿನ ಪ್ರಮಾಣ ಏಕಾಏಕಿ ದುಪ್ಪಟ್ಟಾಗಿದೆ. ಇಂದು ಜಲಾಶಯಕ್ಕೆ 2917 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, 135 ಅಡಿ ಎತ್ತರದ 30ಟಿ.ಎಂ.ಸಿ. ನೀರು ಸಂಗ್ರಹವಾಗಿದೆ ಎಂಬುದಾಗಿ ತಾಲ್ಲೂಕು ತಹಶೀಲ್ದಾರ್ ಸಿದ್ದೇಶ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರಸ್ತುತ ಜಲಾಶಯದ ನೀರಿನ ಮಟ್ಟ 129.40ಅಡಿ ತಲುಪಿದ್ದು, ಇದೇ ಪ್ರಮಾಣದಲ್ಲಿ ಒಳಹರಿವು ಇಂದು ಮುಂದುವರೆದರೆ ಜಲಾಶಯವು ಯಾವ ಕ್ಷಣದಲ್ಲಾದರೂ ಭರ್ತಿಯಾಗಿ ಕೋಡಿ ಬೀಳಲಿದ್ದು, ವೇದಾವತಿ ಜಲಾಯನ ಪ್ರದೇಶದ ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಹಾಗೂ ಸುರಕ್ಷಿತ ಜಾಗಗಳಲ್ಲಿ ಇರುವಂತೆ ವಾಣಿವಿಲಾಸ ಸಾಗರ ಜಲಾನಯನ ಅಭಿವೃದ್ಧಿ ನಿಗಮದ ಅಧಿಕಾರಿಗಳು ಸೂಚನೆ ನೀಡಿದ್ದು, ಸಾರ್ವಜನಿಕರು ಸುರಕ್ಷತೆ ಕಾಪಾಡಿಕೊಳ್ಳುವಂತೆ ತಹಶೀಲ್ದಾರ್ ಸಿದ್ದೇಶ್ ರವರು ಅವರು ತಿಳಿಸಿದ್ದಾರೆ.
