
ಹಿರಿಯೂರು:
ಪ್ರಕೃತಿಯಲ್ಲಿ ಕಾಡು ಉಳಿಸಿದರೆ ಮಾತ್ರ ಈ ನಾಡು ಉಳಿಯಲು ಸಾಧ್ಯ, ಆಕ್ಸಿಜನ್ ನಮ್ಮೆಲ್ಲರ ಜೀವನಾಡಿ ಆಕ್ಸಿಜನ್ ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ಗಿಡ-ಮರ ಕಾಡುಗಳಿಂದ ನಮಗೆ ಶುದ್ಧ ಆಕ್ಸಿಜನ್ ಸೇರಿದಂತೆ ಹಲವು ಸೌಲಭ್ಯಗಳು ದೊರೆಯುತ್ತಿವೆ. ಆದರೆ ನಾವು ಅರಣ್ಯಸಂಪತ್ತನ್ನು ಹಣಕ್ಕೋಸ್ಕರ ಹಾಳು ಮಾಡುತ್ತಿದ್ದೇವೆ. ಮನೆ ನಿರ್ಮಾಣಕ್ಕೆ ಬೇಕಾಗುವ ಮರಮುಟ್ಟುಗಳಿಗಾಗಿ ಕಾಡಿನ ಮರಗಳನ್ನು ಕಡಿಯುತ್ತಿದ್ದೇವೆ ಎಂಬುದಾಗಿ ರೆಡ್ ಕ್ರಾಸ್ ಚೇರ್ಮನ್ ಸುಂದರ್ ರಾಜ್ ಹೇಳಿದರು.
ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ 71 ನೇ ವನ್ಯ ಜೀವಿ ಸಪ್ತಾಹ-2025ರ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವನ್ಯ ಜೀವಿ ಸಂರಕ್ಷಣಾ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಎಲ್ಲಾ ರೀತಿಯಲ್ಲಿಯೂ ಪ್ರಕೃತಿಯನ್ನು ಹಾಳು ಮಾಡುವ ಸಂಸ್ಕೃತಿ ನಮ್ಮ ಮಾನವ ಜಾತಿಗೆ ಬಂದಿದೆ. ಪ್ರಾಣಿಗಳು ಅರಣ್ಯ ನಾಶಮಾಡುವುದಿಲ್ಲ ಆದರೆ ಬುದ್ಧಿವಂತ ಮಾನವ ಅರಣ್ಯ ನಾಶ ಮಾಡುತ್ತಿದ್ದಾನೆ. ಮಳೆ-ಬೆಳೆಯಾಗಲು ಕಾಡನ್ನು ಉಳಿಸಿ ಬೆಳೆಸಬೇಕು. ನಾವು –ನೀವೆಲ್ಲರೂ ಕಾಡನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಹಾಗೂ ಕಾಲೇಜಿನ ಸಿಬ್ಬಂದಿವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
