

ಹಿರಿಯೂರು:
ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಶ್ರೀಆಂಜನೇಯಸ್ವಾಮಿ ದೇವಾಲಯದ ಸಮೀಪದ ಬನ್ನಿಮಂಟಪದ ಹತ್ತಿರ ಗುರುವಾರ ನಗರದ ಪ್ರಮುಖ ದೇವತೆಗಳ ಸಮ್ಮುಖದಲ್ಲಿ ಅಂಬಿನೋತ್ಸವ ಸಕಲ ಭಕ್ತಾದಿಗಳ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಈ ಅಂಬಿನೋತ್ಸವದಲ್ಲಿ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಭಾಗವಹಿಸಿ ತಹಶೀಲ್ದಾರ್ ಸಿದ್ದೇಶ್ ರವರ ನೇತೃತ್ವದ ಸಾಂಪ್ರದಾಯಿಕ ಅಂಬಿನೋತ್ಸವಕ್ಕೆ ಚಾಲನೆ ನೀಡಿದರಲ್ಲದೆ, ನಾಡಿನ ಒಳಿತಾಗಿ ದೇವರುಗಳಲ್ಲಿ ಪ್ರಾರ್ಥಿಸಿ, ಎಲ್ಲಾ ದೇವರುಗಳ ಆಶಿರ್ವಾದ ಪಡೆದರು.

ನಗರದಲ್ಲಿ ದಸರಾ ಹಬ್ಬದ ಪ್ರಯುಕ್ತ ವಿವಿಧ ದೇವಾಲಯಗಳಲ್ಲಿ ಪೂಜಾ ಕಾರ್ಯಗಳು ನಡೆದಿದ್ದು, ಗುರುವಾರ ನಗರದ ಪ್ರಮುಖ ದೇವರುಗಳಾದ ಶ್ರೀ ತೇರುಮಲ್ಲೇಶ್ವರಸ್ವಾಮಿ, ಮೈಲಾರಲಿಂಗೇಶ್ವರಸ್ವಾಮಿ, ರಾಜಾದುರ್ಗಾಪರಮೆಶ್ವರಿ ದೇವಿ, ರೇವಣಸಿದ್ದೇಶ್ವರಸ್ವಾಮಿ, ಬನಶಂಕರಿ ದೇವಿ, ಹೊಸೂರಮ್ಮ, ಲಕ್ಷ್ಮೀನರಸಿಂಹಸ್ವಾಮಿ, ಕಾಳಿಕಾಂಬ ದೇವಿ, ವೀರಭದ್ರಸ್ವಾಮಿ, ಗೌರಸಂದ್ರ ಮಾರಮ್ಮ, ಹುಲಿಗಮ್ಮ ಹಾಗೂ ಪೌದಿಯಮ್ಮ ಸೇರಿದಂತೆ ಒಂಭತ್ತು ದೇವರುಗಳು ವಿವಿಧ ವಾದ್ಯಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಂಜೆ ಬನ್ನಿಮಂಟದ ಆವರಣಕ್ಕೆ ಬಂದು ಸೇರಿದವು.

ಅನಂತರ ತಹಶೀಲ್ದಾರ್ ಎಂ.ಸಿದ್ದೇಶ್ ರವರು ಸಾಂಪ್ರದಾಯಿಕ ಉಡಿಗೆಯಲ್ಲಿ ಅಲಂಕೃತ ಪಲ್ಲಕ್ಕಿಯಿಟ್ಟು ಮೆರವಣಿಗೆಯಲ್ಲಿ ತಂದಿದ್ದು ಬಿಲ್ಲು ಬಾನಗಳನ್ನು ಹಿಡಿದು ಹೂಡಿ ಬಿಡುವ ಮೂಲಕ ದಸರಾ ಅಂಬಿನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನಿಡಿದರು. ಬನ್ನಿ ಮರದಿಂದ ನಗರದ ದೇವತೆಗಳನ್ನು ಕೂರಿಸಿದ ಸ್ಥಳದವರೆಗೆ ಬಾಣ ಹೊಡೆಯುತ್ತಾ ಸಾಗುವ ಮೂಲಕ ಅಂಬಿನೋತ್ಸವ ನೆರವೇರಿತು.

ನಂತರ ಬನ್ನಿಮರದ ಆಂಜನೇಯಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ತದನಂತರ ಸೇರಿದ್ದ ಭಕ್ತಾದಿಗಳು ಬನ್ನಿ ಮರದಿಂದ ಬನ್ನಿ ಪತ್ರೆ ಕಿತ್ತು ಪರಸ್ಪರ ಒಬ್ಬರಿಗೊಬ್ಬರು ಹಂಚುವ ಮೂಲ ಪ್ರೀತಿ,ಸ್ನೇಹ, ಬಾಂಧವ್ಯ ವಿನಿಮಯ ಮಾಡಿಕೊಳ್ಳುವ ಮೂಲಕ ಭಾವೈಕ್ಯತೆ ಸಂದೇಶ ಸಾರುವ ಬನ್ನಿ ಹಬ್ಬದ ಶುಭಾಶಯ ಕೋರುವುದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಆರ್. ಬಾಲಕೃಷ್ಣ, ಉಪಾದ್ಯಕ್ಷೆ ಶ್ರೀಮತಿ ಮಂಜುಳಾ, ಈ ಮಂಜುನಾಥ್, ಪ್ರಕಾಶ್, ಪೌರಾಯುಕ್ತರಾದ ಎ.ವಾಸೀಂ, ಶಿರಸ್ತೇದಾರ್ ಕೆ.ಬಿ. ತಿಪ್ಪೇಸ್ವಾಮಿ, ರಾಜಸ್ವ ನಿರೀಕ್ಷಕ ಸ್ವಾಮಿ, ಮಯಾವರ್ಮ, ರಾಜು, ಚನ್ನಬಸವರಾಜ್, ಮಲ್ಲಪ್ಪ, ಜ್ಞಾನೇಶ್, ಹರೀಶ್, ಶಿವಕುಮಾರ್, ಜಗದೀಶ್ ಭಂಡಾರಿ, ರಾಜಪ್ಪ, ನಗರಸಭೆ ಸದಸ್ಯರು, ದೇವಸ್ಥಾನದ ಕೈವಾಡಸ್ಥರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.