
ಹಿರಿಯೂರು :
ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ರವರು ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಅಡ್ಮಿಟ್ ಆಗಿರುವ ಕಾರಣ ಅವರನ್ನು ನೋಡಲು ಬಂದಿದ್ದ ಇಲಾಖೆ ಅಧಿಕಾರಿಗಳೊಂದಿಗೆ ಬರದ ನಾಡಾದ ಜೆಜೆಹಳ್ಳಿ ಹೋಬಳಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಿರುವ ವಿಷಯವಾಗಿ ಈಗ ಏನೇನು ಕೆಲಸವಾಗಿದೆ ಎಂಬುದರ ಬಗ್ಗೆ ನಾನು ಮತ್ತು ಸಚಿವರ ಆಪ್ತ ಕಾರ್ಯದರ್ಶಿ ಪ್ರಕಾಶ್ ರವರು ಅಧಿಕಾರಿಗಳೊಂದಿಗೆ ಅನೌಪಚಾರಿಕವಾಗಿ ಚರ್ಚೆ ಮಾಡಿದ್ದೇವೆ ಅಷ್ಟೇ ಹೊರತು ಕೆಲವು ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ಯಾವುದೇ ಅಧಿಕೃತ ಸಭೆ ನಡೆಸಿಲ್ಲ ಎಂಬುದಾಗಿ ತಾಲ್ಲೂಕು ಶಿಕ್ಷಣ ಸುಧಾರಣಾ ಸಮಿತಿ ಅಧ್ಯಕ್ಷರಾದ ಅಮೃತೇಶ್ವರಸ್ವಾಮಿ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.
ತಾಲ್ಲೂಕಿನ ಜೆಜಿಹಳ್ಳಿ ಹೋಬಳಿ ಜಿಲ್ಲೆಯಲ್ಲಿಯೇ ಅತ್ಯಂತ ಹಿಂದುಳಿದ ಹಾಗೂ ಬರದ ಪ್ರದೇಶವಾಗಿದ್ದು, ದಿನನಿತ್ಯ ಅಲ್ಲಿನ ಜನ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಇದ್ದು, ಆ ಭಾಗಕ್ಕೆ ಅಗತ್ಯ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂಬುದು ಕ್ಷೇತ್ರದ ಸಚಿವರ ಕನಸಾಗಿದ್ದು, ಈ ಬಗ್ಗೆ ಅಲ್ಲಿನ ಜನರು ಹಲವಾರು ಹೋರಾಟಗಳನ್ನು ಕೈಗೊಂಡಿದ್ದು, ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಸಚಿವರು ಸಹ ಹೋರಾಟ ನಡೆಸಿ, ಸರ್ಕಾರದಿಂದ ಮಂಜೂರಾತಿ ಪಡೆದಿದ್ದು, ಡಿಪಿಆರ್ ಸಹ ಆಗಿದೆ, ಈ ಬಗ್ಗೆ ಆ ಕಲುವಳ್ಳಿ ಪ್ರದೇಶಕ್ಕೆ ತುರ್ತು ನೀರಾವರಿ ಸೌಲಭ್ಯ ಕಲ್ಪಿಸುವ ಅವಶ್ಯಕತೆ ಇದೆ,
ಈ ನಿಟ್ಟಿನಲ್ಲಿ ಸಚಿವರಿಗೆ ಹುಷಾರಿಲ್ಲದ ಕಾರಣ ಸಚಿವರನ್ನು ನೋಡಲು ಬಂದಿದ್ದ ಇಲಾಖೆ ಅಧಿಕಾರಿಗಳೊಂದಿಗೆ ನಾನು ಹಾಗೂ ಅವರ ಆಪ್ತ ಕಾರ್ಯದರ್ಶಿ ಪ್ರಕಾಶ್ ರವರು ಇನ್ನುಳಿದ ಮುಖಂಡರು ಸೇರಿ ಈಗ ಏನೇನು ಕೆಲಸವಾಗಿದೆ, ಕೆಲಸ ಎಲ್ಲಿಯವರೆಗೆ ಬಂದಿದೆ, ಎಂಬುದರ ಬಗ್ಗೆ ಅಲ್ಲದೆ ಈಗ ಬೇಸಿಗೆಕಾಲ ಆಗಿರುವುದರಿಂದ ಈ ಭಾಗಕ್ಕೆ ತುರ್ತು ಕೆಲಸವಾಗಬೇಕೆಂಬ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಪರಸ್ಪರ ಮಾಹಿತಿ ಹಂಚಿಕೊಂಡಿದ್ದೇವೆ ಅಷ್ಟೇ ಹೊರತು ಅದು ಯಾವುದೇ ಸಭೆ ನಡೆಸಿಲ್ಲ, ನಾವುಗಳು ಯಾವುದೇ “ಸೂಪರ್ ಮಿನಿಸ್ಟರ್” ಅಲ್ಲ ಎಂಬುದಾಗಿ ಅವರು ಹೇಳಿದ್ದಾರೆ.
ನಮ್ಮ ಜೆಜಿಹಳ್ಳಿ ಹೋಬಳಿಯ ಕಲವಳ್ಳಿಯ ಭಾಗಕ್ಕೆ ಅಗತ್ಯ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ನಡೆದಿರುವ ಈ ಭಾಗದ ಜನರ ಹಲವಾರು ಹೋರಾಟಗಳಲ್ಲಿ ನಾನೂ ಸಹ ಸಕ್ರಿಯವಾಗಿ ಪಾಲ್ಗೊಂಡಿದ್ದು, ಅಲ್ಲದೆ ಈ ಭಾಗದ ಜನರ ಜೊತೆ ಸೇರಿ ಸಚಿವ ಸುಧಾಕರ್ ರವರ ಮೇಲೆ ಒತ್ತಡ ತಂದು ಕಳೆದ 2-3 ವರ್ಷಗಳಲ್ಲಿ ಕ್ಷೇತ್ರದ ಸಚಿವ ಸುಧಾಕರ್ ರವರ ಜೊತೆ ಈ ವಿಚಾರವಾಗಿ ರಾಜ್ಯ ಮಟ್ಟದ ಅಧಿಕಾರಿಗಳ ಜೊತೆ ನಡೆದ 30ಕ್ಕೂ ಹೆಚ್ಚು ಸಭೆಗಳಲ್ಲಿ ನಾನೂ ಸಹ ಭಾಗವಹಿಸಿದ್ದು, ಈ ಭಾಗದ ಕಲುವಳ್ಳಿ ಜನರನ್ನು ಪ್ರತಿನಿಧಿಸಿದ್ದೇನೆ.
ಈ ಕಲುವಳ್ಳಿ ಭಾಗಕ್ಕೆ ಶಾಶ್ವತ ನೀರು ಹರಿಸುವ ಕ್ಷೇತ್ರದ ಸಚಿವರಾದ ಡಿ.ಸುಧಾಕರ್ ರವರ ಕನಸನ್ನು ನನಸು ಮಾಡುವಲ್ಲಿ ಆ ಕಲುವಳ್ಳಿ ಭಾಗದ ಕಾಂಗ್ರೆಸ್ ಮುಖಂಡನಾಗಿ ಅನವರತ ಸಚಿವರ ಜೊತೆ ಓಡಾಡಿದ್ದೇನೆ, ಈ ಭಾಗದ ಜನರ ನೋವು-ನಲಿವುಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ, ಒಬ್ಬ ಹಿರಿಯ ಕಾಂಗ್ರೆಸ್ಸಿಗನಾಗಿದ್ದರೂ ಅತ್ಯಂತ ಸರಳ ಸಜ್ಜನಿಕೆಯ ಕಾಂಗ್ರೆಸ್ ಕಾರ್ಯಕರ್ತನಾಗಿ ನಡೆದುಕೊಂಡಿದ್ದೇನೆ ಅಷ್ಟೇ ಹೊರತು ಯಾವುದೇ “ಸೂಪರ್ ಮಿನಿಸ್ಟರ್” ತರ ಎಂದೂ ವರ್ತಿಸಿಲ್ಲ, ಮುಂದೆ ಎಂದೂ ವರ್ತಿಸುವುದೂ ಇಲ್ಲ ಎಂಬುದಾಗಿ ಅವರು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
