
ಹಿರಿಯೂರು :
ಮಹಿಳಾ ಸಂಘಟನೆಗಳನ್ನು ಬಲವರ್ಧನೆಗೊಳಿಸಲು ಹಲವಾರು ದಾರಿಗಳಿದ್ದು, ಮಹಿಳೆಯರು ಅದನ್ನು ಗುರುತಿಸುವಲ್ಲಿ ಸಫಲರಾಗಬೇಕು, ಆಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂಬುದಾಗಿ ಚಿತ್ರದುರ್ಗ ಜಿಲ್ಲಾ ಘಟಕದ ಕೋಶಾಧ್ಯಕ್ಷರಾದ ಶ್ರೀಮತಿ ಹೆಚ್.ಲೋಕಮ್ಮ ಹೇಳಿದರು.
ರಾಜ್ಯ ಸರ್ಕಾರಿ ನಿವೃತ್ತ ನೌಕರರಭವನದಲ್ಲಿ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಹಿರಿಯೂರು ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಹಿರಿಯೂರು ಶಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಗುರುಸಿದ್ದಪ್ಪರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನೌಕರರಿಗೆ ಸಂಘಟನೆ ಏಕೆ ಬೇಕು, ಮತ್ತು ಅದರ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.

ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಹಿರಿಯೂರು ತಾಲ್ಲೂಕು ಘಟಕದ ಅಧ್ಯಕ್ಷರಾದ ಶ್ರೀಮತಿ ಆರ್.ಎ.ಸ್ವಪ್ನ ಮಾತನಾಡಿ, ಸಂಘದ ಕಾರ್ಯ ಚಟುವಟಿಕೆ ಹಾಗೂ ಸಂಘದ ಮಹತ್ವವನ್ನು ಕುರಿತು ಮಾತನಾಡಿದರು.
ಶ್ರೀಮತಿ ಸಾವಿತ್ರಮ್ಮ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿಗಳು ಮಾತನಾಡಿ, ಹೆಣ್ಣು ಕುಲದ ಗುಣಗಳನ್ನು ವರ್ಣಿಸಿ ಸ್ತ್ರೀಯರ ಮಹತ್ವವನ್ನು ತಿಳಿಸಿದರು. ನಂತರ ಈ ಕಾರ್ಯಕ್ರಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ತಾಲ್ಲೂಕಿನ ನಿವೃತ್ತ ಮಹಿಳಾ ಶಿಕ್ಷಕಿಯರನ್ನು ಹಾಗೂ ವಿಶೇಷವಾಗಿ ಹಿರಿಯ ಮಹಿಳಾ ಪೌರಕಾರ್ಮಿಕರನ್ನು ಗುರುತಿಸಿ ಅವರ ಸೇವೆಯನ್ನು ಸ್ಮರಿಸಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಹೆಚ್.ಆರ್.ನಿರ್ಮಲ, ಖಜಾಂಚಿಗಳಾದ ಶ್ರೀಮತಿ ರೇಣುಕಮ್ಮ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಪದಾಧಿಕಾರಿಗಳಾದ ಹೆಚ್.ಡಿ.ತಿಪ್ಪಮ್ಮ, ಮೆಹಬೂಬಿ, ರತ್ನಕ್ಕ, ಜ್ಯೋತಿ ಜೋಶಿ, ಮಮತಾ, ಜಯಮ್ಮ ಇತರರು ಉಪಸ್ಥಿತರಿದ್ದರು.
