
ಹಿರಿಯೂರು :
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಸಿದ್ದರಾಮಯ್ಯರವರ ಐತಿಹಾಸಿಕ, ದಾಖಲೆಯ 17ನೇ ಬಜೆಟ್, 2026-27ನೇ ಸಾಲಿನ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರೈಸಲು 5000 ಕೋಟಿ ರೂ ಮೀಸಲಿಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲಾ ಶಾಸಕರು ಮುಖ್ಯಮಂತ್ರಿಗಳಲ್ಲಿ ಹಕ್ಕೊತ್ತಾಯ ಮಂಡಿಸಿದ್ದು, ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಹಣ ಮೀಸಲಿಡದೆ ಇರುವುದು ಬಯಲು ಸೀಮೆ ರೈತರಲ್ಲಿ ನಿರಾಸೆ ಉಂಟಾಗಿದೆ ಕರ್ನಾಟಕ ರಾಜ್ಯ ರೈತಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆ ಮುಖಾಂತರ ಇದೇ ವರ್ಷದೊಳಗೆ 157 ಕೆರೆಗೆ ನೀರು ಹರಿಸುವುದರಲ್ಲಿ ಬಯಲು ಸೀಮೆಯ ಚಿತ್ರದುರ್ಗ ಜಿಲ್ಲೆಯ ಕೆರೆಗಳ ಪಾಲು ಹೆಚ್ಚಿರಲಿ, ಹಿರಿಯೂರು ತಾಲೂಕಿಗೆ ಸಂಚಾರಿ ಪೊಲೀಸ್ ಠಾಣೆ ಪ್ರಾರಂಭಿಸುವಂತೆ ರೈತ ಸಂಘ ದಶಕಗಳಿಂದ ಮನವಿ ಸಲ್ಲಿಸಿದ್ದು, ಈ ಬಜೆಟ್ ನಲ್ಲಿ ಹಿರಿಯೂರಿಗೆ ಸಂಚಾರಿ ಪೊಲೀಸ್ ಠಾಣೆಗೆ ಮುಂಜೂರಾತಿ ನೀಡಿರುವುದು ತಾಲೂಕಿನ ಜನತೆಗೆ ಸಂತೋಷ ತಂದಿದೆ, ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ತರಬೇತಿ ಕೇಂದ್ರವನ್ನು ರಾಜ್ಯಮಟ್ಟದ ಕೃಷಿ ಉದ್ದಿಮೆ ತರಬೇತಿ ಕೇಂದ್ರವಾಗಿ ಉನ್ನತೀಕರಣಗೊಳಿಸಿದ್ದು, ಸಂತಸ ತಂದಿದ್ದರೂ, ಈ ಬಜೆಟ್ ನಿರಾಶದಾಯಕವಾಗಿದೆ ಎಂಬುದಾಗಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
