
ಹಿರಿಯೂರು :
ಕೇಂದ್ರ ಸರ್ಕಾರ ಘೋಷಿಸಿರುವ 5300 ಕೋಟಿ ಹಣ ಕೊಡಲೇ ಬಿಡುಗಡೆಗೊಳಿಸಬೇಕು, ರಾಜ್ಯ ಸರ್ಕಾರ ಬರುವ ಬಜೆಟ್ ನಲ್ಲಿ 5000 ಕೋಟಿ ಮೀಸಲಿಟ್ಟು, ಜೆಜೆ ಹಳ್ಳಿ ಹೋಬಳಿಯ ಗಾಯತ್ರಿ ಜಲಾಶಯ ಸೇರಿ 16 ಕೆರೆಗಳಿಗೆ ಬರುವ ಬಜೆಟ್ ಅಧಿವೇಶನದಲ್ಲಿ ಕನಿಷ್ಠ 400 ಕೋಟಿ ಮೀಸಲು ಇಡಬೇಕು, ಜಿಲ್ಲೆಯ ಎಲ್ಲಾ ಮಣ್ಣಿನ ಕೆರೆಗಳಿಗೂ ನೀರು ತುಂಬಿಸಬೇಕು ಎಂಬುದಾಗಿ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು.
ತಾಲ್ಲೂಕು ರೈತಸಂಘದ ಕಚೇರಿ ಸಭಾಂಗಣದಲ್ಲಿ ತಾಲೂಕು ರೈತ ಸಂಘದ ವತಿಯಿಂದ ಕರೆಯಲಾಗಿದ್ದ ಮಾಸಿಕ ಸಭೆಯನ್ನು ಉದ್ದೇಶಿಸಿ, ಅವರು ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯ ಬಯಲುಸೀಮೆಗೆ ನೀರು ಹರಿಸುವ ವಿಚಾರವಾಗಿ ಸರ್ಕಾರದ ಧೋರಣೆಯನ್ನು ಖಂಡಿಸಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಫೆಬ್ರವರಿ 4ರಂದು ಅನಿರ್ಧಿಷ್ಟ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿ, ಫೆಬ್ರವರಿ 10 ರಂದು ಜಿಲ್ಲೆಯ ಎಲ್ಲಾ ತಾಲೂಕುಗಳು ಬಂದ್ ಆಚರಿಸಿ, ಫೆಬ್ರವರಿ 12ರಿಂದ ಹಿರಿಯೂರಿನಿಂದ ಚಿತ್ರದುರ್ಗಕ್ಕೆ ಫೆಬ್ರವರಿ 13 ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಸಮಾವೇಶ ನಡೆಸಿ ಸಚಿವರು ಶಾಸಕರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ,
ಸರ್ಕಾರಕ್ಕೆ ಒತ್ತಾಯಿಸಿದ ಏಳು ದಿನದೊಳಗಾಗಿ ರೈತರೊಂದಿಗೆ ಸರ್ಕಾರ ಸಭೆ ಕರೆದು ಭರವಸೆ ನೀಡಬೇಕು ಎಂದು ಮನವಿ ಮಾಡಲಾಗಿದ್ದರೂ ಇದುವರೆಗೂ ಯಾವುದೇ ಸಭೆ ನಡೆಸದೆ ಭರವಸೆ ನೀಡದೇ ಇರುವುದರಿಂದ ಮಾರ್ಚ್ 2 ಸೋಮವಾರದಿಂದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂಭಾಗದಲ್ಲಿ ಅನಿರ್ದಿಷ್ಟ ಅಮರಣಾಂತರ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ಜಿಲ್ಲೆಯ ಎಲ್ಲಾ ರೈತರು ತೀರ್ಮಾನಿಸಲಾಗಿದೆ ಎಂಬುದಾಗಿ ಸಭೆಗೆ ತಿಳಿಸಿದರು.
ಈ ಸಭೆಯಲ್ಲಿ ರೈತಸಂಘದ ತಾಲೂಕು ಅಧ್ಯಕ್ಷರಾದ ಬಳಗಟ್ಟೆ ಸಿ.ವೆಂಕಟೇಶ್, ಆಲೂರು ಸಿದ್ದರಾಮಣ್ಣ, ಗೌರವಾಧ್ಯಕ್ಷರಾದ ರಂಗಸ್ವಾಮಿ, ರೈತಮುಖಂಡರುಗಳಾದ ಹಳ್ಳಿಕೆರೆತಿಪ್ಪೇಸ್ವಾಮಿ, ಸಣ್ಣತಿಮ್ಮಣ್ಣ, ಬಳಗಟ್ಟೆತಿಮ್ಮಯ್ಯ, ಮಂಜ ನಾಯಕ್, ವೀರಣ್ಣಗೌಡ, ವಿರೂಪಾಕ್ಷ, ರಾಮಣ್ಣ, ಮೀಸೆಗೌಡಪ್ಪ, ಬಾಲಕೃಷ್ಣ, ಮಂಜುನಾಥ, ಶಿವಣ್ಣ, ಮೃತ್ಯುಂಜಯಪ್ಪ, ಜಯಣ್ಣ, ಶಿವಣ್ಣ, ನಾರಾಯಣಪ್ಪ, ಎಂ.ಆರ್.ಈರಣ್ಣ, ಕೆ.ಟಿ.ರುದ್ರಮುನಿ, ಕನ್ಯಪ್ಪ, ಬಾಲಕೃಷ್ಣ, ಸಣ್ಣೀರಪ್ಪ, ನಿಂಗಪ್ಪ, ರಾಮಕೃಷ್ಣ, ಅಶ್ವತಪ್ಪ, ನಾಗರಾಜಪ್ಪ, ಚಂದ್ರಪ್ಪ, ವೆಂಕಟೇಶ್ ಗುಡಿಹಳ್ಳಿ, ಟಿ.ತಿಮ್ಮಯ್ಯ, ಗೋವಿಂದಪ್ಪ, ಕರಿಯಪ್ಪ, ಇತರರು ಉಪಸ್ಥಿತರಿದ್ದರು.

