
ಹಿರಿಯೂರು:
ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರು ಕೇಂದ್ರ ಸರ್ಕಾರದ ಮೇಲೆ ಬೆರಳು ತೋರಿಸುತ್ತಿದ್ದಾರೆ ಎಂಬುದಾಗಿ ಸಂಸದರಾದ ಗೋವಿಂದಕಾರಜೋಳ ಅವರು ಹೇಳಿದರು.
ನಗರದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸುದ್ಧಿಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದ ಜನತೆಗೆ ಸತ್ಯ ಹೇಳಬೇಕೆಂಬ ಧರ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಅವರ ಸಂಪುಟದ ಸಚಿವರಿಗೆ ಇದ್ದಿದ್ದರೆ ಕೇಂದ್ರದಿಂದ ರಾಜ್ಯಕ್ಕೆ 2014ಕ್ಕಿಂತ ಮುಂಚೆ ಬರುತ್ತಿದ್ದ ಅನುದಾನ ಹಾಗೂ 2018ರ ನಂತರ ಇಲ್ಲಿಯವರೆಗೆ ರಾಜ್ಯಕ್ಕೆ ಬಂದಿರುವ ಅನುದಾನದ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂಬುದಾಗಿ ಅವರು ಒತ್ತಾಯಿಸಿದರು.

ಕಾಂಗ್ರೆಸ್ ನಾಯಕರು ಅಧಿಕಾರದ ಆಸೆಗಾಗಿ ಬೇಕಾಬಿಟ್ಟಿ ಆಮಿಷಗಳನ್ನು ಜನರಿಗೆ ಒಡ್ಡಿ ಬೇಕಾಬಿಟ್ಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅಂತಹ ಯೋಜನೆಗಳಿಗೆ ಹಣ ಹೊಂದಿಸಲಾಗದೆ ಸರ್ಕಾರ ದಿವಾಳಿಯ ಅಂಚಿನಲ್ಲಿದೆ. ಕಾಂಗ್ರೆಸ್ ನವರಿಗೆ ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ ಟೀಕೆ ಮಾಡುವುದು ಒಂದು ಚಾಳಿಯಾಗಿ ಬಿಟ್ಟಿದೆ. ಎಂದರಲ್ಲದೆ,
ಸಿದ್ದರಾಮಯ್ಯನವರ ಆಡಳಿತ ಸಾರ್ವಜನಿಕವಾಗಿ ಪ್ರತಿದಿನ ಬಳಸುವಂತಹ ದೈನಂದಿನ ವಸ್ತುಗಳ ಬೆಲೆ ಕಡಿಮೆ ಮಾಡದೆ ಕೇಂದ್ರ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ನಾಚಿಗೇಡಿನ ಸಂಗತಿ ಎಂಬುದಾಗಿ ಅವರು ಹೇಳಿದರು.
ಹಾಲು, ಅಬಕಾರಿ ನೋಂದಣಿ ಶುಲ್ಕ,ವಿದ್ಯುತ್, ಪೆಟ್ರೋಲ್, ಡೀಸೆಲ್ ಇವುಗಳನ್ನು ದುಬಾರಿ ಮಾಡಿದ ನಂತರ ಮಾಡಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ರಾಜ್ಯದಲ್ಲಿ ಆಡಳಿತ ಯಂತ್ರ ಸತ್ತು ಹೋಗಿದೆ. ಕಳೆದ ಒಂದೂವರೆ ವರ್ಷದಿಂದ ಅಧಿಕಾರದ ಗದ್ದುಗೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಗ್ಗ- ಜಗ್ಗಾಟವನ್ನು ಸಾರ್ವಜನಿಕವಾಗಿ ನಡೆಸುತ್ತಿರುವುದನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ.
ರಾಜ್ಯದಲ್ಲಿ ಅಪರಾಧ ಕೃತಿಗಳು ಹೆಚ್ಚಾಗಿ ನಡೆಯುತ್ತಿದೆ. ಕಿಡಿಗೇಡಿಗಳು ಸಾರ್ವಜನಿಕರನ್ನು ಅಮಾನುಷವಾಗಿ ಹಿಂಸಿಸುತ್ತಿದ್ದಾರೆ. ನಿರುದ್ಯೋಗಿಗಳು ಹತಾಶರಾಗಿ ಉದ್ಯೋಗಕ್ಕಾಗಿ ಬೀದಿಗೆ ಇಳಿದು ಹೋರಾಟ ನಡೆಸುತ್ತಿದ್ದಾರೆ. ಚುನಾವಣೆಯನ್ನು ಗೆಲ್ಲಬೇಕೆಂಬ ದುರುದ್ಧೇಶದಿಂದ ಯೋಗ್ಯವಲ್ಲದ ಯೋಜನೆಗಳನ್ನು ಸರ್ಕಾರ ಜಾರಿಗೆಗೊಳಿಸಿದ್ದರಿಂದ ಜನರು ಪರದಾಡುವಂತಾಗಿದೆ ಎಂಬುದಾಗಿ ಅವರು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬಿ.ಜೆ.ಪಿ. ಮಂಡಲ ಅಧ್ಯಕ್ಷರಾದ ಕೆ.ಅಭಿನಂದನ್ ಸೇರಿದಂತೆ ಅನೇಕ ಬಿ.ಜೆ.ಪಿ. ಮುಖಂಡರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

