
ಹಿರಿಯೂರು :
ವಿದ್ಯಾರ್ಥಿಗಳಿಗೆ ಸಂತಸದ ಜೊತೆಗೆ ವ್ಯವಹಾರ ಜ್ಞಾನವನ್ನು ಬೆಳೆಸುವ ಉದ್ದೇಶದಿಂದ ನಮ್ಮ ಶಾಲೆಯಲ್ಲಿ “ಫುಡ್ ಫೆಸ್ಟಿವಲ್” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ವ್ಯಾಪಾರ ಮಾಡುವ ಶೈಲಿ ಹಾಗೂ ವ್ಯಾಪಾರದಲ್ಲಿನ ಲಾಭ-ನಷ್ಟಗಳು, ಹಾಗೂ ಹಣದ ಗಳಿಕೆಯನ್ನು ತಿಳಿಸುವ ಮೂಲಕ ಸ್ವಅನುಭವದ ಕಲಿಕೆ ಉಂಟು ಮಾಡುತ್ತದೆ ಎಂಬುದಾಗಿ ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆಲೂರುಹನುಮಂತರಾಯಪ್ಪ ಹೇಳಿದರು.
ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ “ಫುಡ್ ಫೆಸ್ಟಿವಲ್” ಕಾರ್ಯಕ್ರಮವನ್ನು ಟೇಪ್ ಕತ್ತರಿಸಿ, ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ನಂತರ ಅವರು ಮಾತನಾಡಿದರು.

ಇಂದಿನ ಆಧುನಿಕ ಸಮಾಜದಲ್ಲಿ ವೈದ್ಯರಾಗಿ, ಇಂಜಿನಿಯರ್ ಆಗಿ ಉದ್ಯೋಗ ನಿರ್ವಹಿಸುವವರಿಗಿಂತಲೂ ಹೋಟೆಲ್ ಹಾಗೂ ರೆಸ್ಟೋರೆಂಟ್ ಉದ್ಯಮಿಗಳು, ಬೇಕರಿ ವ್ಯಾಪಾರಿಗಳು, ಫುಟ್ ಪಾತ್ ಗಳಲ್ಲಿ ಫಾಸ್ಟ್ ಫುಡ್ ತಯಾರಿಕಾ ವ್ಯಾಪಾರಿಗಳು ಹೆಚ್ಚು ಹಣ ಸಂಪಾದಿಸುತ್ತಿದ್ದಾರೆ, ಇದಕ್ಕೆ ಕಾರಣ ಅವರು ತಯಾರಿಸುವ ಆಹಾರದ ರುಚಿ ಹಾಗೂ ಶುಚಿತ್ವವಾಗಿದ್ದು, ಇವರು ಹಲವಾರು ಸಾಫ್ಟ್ ವೇರ್ ಉದ್ಯೋಗಿಗಳ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಿದ್ದಾರೆ ಎಂದರಲ್ಲದೆ,
ಬಾಲ್ಯದಲ್ಲಿಯೇ ಮಕ್ಕಳಿಗೆ ಸಾಮಾಜಿಕ ಪ್ರಜ್ಞೆ, ಆರ್ಥಿಕ ಪ್ರಜ್ಞೆ ಬೆಳೆಸಿಕೊಳ್ಳುವ ಮೂಲಕ ವ್ಯಾಪಾರ, ವ್ಯವಹಾರಗಳ ಕಲ್ಪನೆಯನ್ನು ಮೂಡಿಸುವ ಜೊತೆಗೆ ಬೇಕರಿಗಳು, ಪಾನಿಪೂರಿಸ್ಟಾಲ್ ಗಳು, ಕೆಫೆಗಳಂತಹ ವ್ಯಾಪಾರಕೇಂದ್ರಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬ ಪರಿಕಲ್ಪನೆಯನ್ನು ಮಕ್ಕಳಿಗೆ ಅನುಭವದ ಮೂಲಕ ಕಲಿಸುವಂತಹ ಕಾರ್ಯಕ್ರಮ ಇದಾಗಿದೆ ಎಂಬುದಾಗಿ ಅವರು ಹೇಳಿದರು.

ನಮ್ಮ ವಿದ್ಯಾಸಂಸ್ಥೆಯ ಎಲ್ಲಾ ಶಿಕ್ಷಕ-ಶಿಕ್ಷಕಿಯರ ಸಹಕಾರ ಹಾಗೂ ಪೋಷಕರ ಬೆಂಬಲದಿಂದ ಫುಡ್ ಫೆಸ್ಟಿವಲ್ ಕಾರ್ಯಕ್ರಮ ಪ್ರತಿವರ್ಷ ಯಶಸ್ವಿಯಾಗಿ ನಡೆಯುತ್ತಿದ್ದು, ಈ ಫುಡ್ ಫೆಸ್ಟಿವಲ್ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ನಮ್ಮ ಶಾಲೆಯ ಎಲ್ಲಾ ಶಿಕ್ಷಕ-ಶಿಕ್ಷಕಿಯರು, ಪೋಷಕರು ಹಾಗೂ ಮಕ್ಕಳಿಗೆ ನಮ್ಮ ವಿದ್ಯಾಸಂಸ್ಥೆಯ ಪರವಾಗಿ ಅಭಿನಂದನೆಗಳು ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಾವು ಮನೆಯಿಂದ ತಯಾರಿಸಿಕೊಂಡು ಬಂದಿದ್ದ ಪಾನಿಪೂರಿ, ಬೇಬಿ ಕಾರ್ನ್, ಪಾವ್ ಬಾಜಿ, ನಿಪ್ಪಟ್ ಮಸಾಲ, ಪ್ರೋಟ್ ಸಲಾಡ್, ಲಸ್ಸೀ, ಚುರುಮುರಿ, ಹಣ್ಣಿನ ಜೂಸ್, ಜಾಮೂನ್, ರಸಗುಲ್ಲಾ, ಫ್ರೆಂಚ್ ಫ್ರೈ, ವಡೆ ಚಟ್ನಿ, ಸಮೋಸ, ಸ್ಯಾಂಡ್ ವಿಚ್ ಹೀಗೆ ಹಲವಾರು ಆಹಾರ ಪದಾರ್ಥಗಳನ್ನು ಪೋಷಕರಿಗೆ, ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಸೂಕ್ತ ಬೆಲೆಗೆ ಮಾರಾಟ ಮಾಡುವ ಮೂಲಕ ಎಲ್ಲರ ಮೆಚ್ಚಗೆಗೆ ಪಾತ್ರರಾದರು.

ಈ ಕಾರ್ಯಕ್ರಮದಲ್ಲಿ ವಾಣಿವಿಲಾಸ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸೌಮ್ಯ, ವಿದ್ಯಾಸಂಸ್ಥೆಯ ವ್ಯವಸ್ಥಾಪಕಿ ಶ್ರೀಮತಿ ವಸಂತಾ, ಆಡಳಿತಾಧಿಕಾರಿ ಶ್ರೀಮತಿ ಹೇಮಲತಾ, ಕೋ-ಆರ್ಡಿನೇಟರ್ ಶ್ರೀಮತಿ ರಚನಾ, ಶಿಕ್ಷಕಿಯರುಗಳಾದ ಶ್ರೀಮತಿ ಗಂಗಮ್ಮ, ಶ್ರೀಮತಿ ರಜಿಯಾ, ಶ್ರೀಮತಿ ಮುಬೀನಾ, ಶ್ರೀಮತಿ ಸಾಧಿಕಾ, ಶ್ರೀಮತಿ ಹೇಮಲತಾ, ಶ್ರೀಮತಿ ಅಕ್ಷಿತಾ, ಶ್ರೀಮತಿ ಮಮತಾ, ಕಾವ್ಯ, ಪೂಜಾ, ಸುಲೋಚನಾ, ಶಿಕ್ಷಕರುಗಳಾದ ಉಮೇಶ್ ಯಾದವ್, ಶಿವರಾಜ್ ನಾಯಕ್, ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಭಾಗ್ಯ, ಶ್ರೀಮತಿ ಜಯಸುಧಾ, ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

