
ಹಿರಿಯೂರು:
ನಗರದ ವಾಣಿಸಕ್ಕರೆ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿಗೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು 12ಕೋಟಿರೂಗಳ ಅನುದಾನ ನೀಡಿದ್ದಾರೆ ಎಂಬುದಾಗಿ ಕಾಲೇಜು ಸಿ.ಡಿ.ಸಿ ಸಮಿತಿ ಸದಸ್ಯರಾದ ಜಿ.ಪ್ರೇಮ್ ಕುಮಾರ್ ಅವರು ಹೇಳಿದರು.
ನಗರದ ವಾಣಿ ಸಕ್ಕರೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ 1.80ಕೋಟಿ ರೂ.ವೆಚ್ಚದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ಹೆಜ್ಜೆ ಗುರುತು ಮೂಡಿಸಿರುವ ಪದವಿ ಕಾಲೇಜು ಗ್ರಾಮೀಣ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಆಶಾಕಿರಣವಾಗಿದೆ. ರೈತರು, ದಾನಿಗಳು, ಶಿಕ್ಷಣ ಪ್ರೇಮಿಗಳು, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಕಟ್ಟಿದ ಕಾಲೇಜು ಇಂದು ಉನ್ನತ ಮಟ್ಟಕ್ಕೆ ಬೆಳೆದಿದೆ. ದಾವಣಗೆರೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮಾಡಿ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ ಎಂಬುದಾಗಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಡಾ.ಮಹೇಶ್, ಡಾ.ಮಂಜುಳಾ, ಅಶೋಕ್, ಡಾ.ದೇವಿಕಾ, ಡಾ.ಡಿ.ಧರಣೇಂದ್ರಯ್ಯ, ಡಾ.ಗಂಗಾಧರ್, ವೇದಾ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ.ಹನುಮಂತರಾಯಪ್ಪ, ಪಿ.ನರಸಿಂಹಮೂರ್ತಿ, ಲಿಂಗರಾಜ್, ಮದನ್, ನಾಗರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

