
ಹಿರಿಯೂರು :
ವಾಣಿವಿಲಾಸ ಸಾಗರ ಜಲಾಶಯ ಭರ್ತಿ ಆಗಿದ್ದು ಸರಿ ಅಷ್ಟೇ. ಇಂಥ ಸುಸಂದರ್ಭದಲ್ಲಿ ವಿವಿಧ ಭಾಗಗಳಿಂದ ಕಪ್ಪು ಹಣ ಹೊಂದಿರುವ ಜನರು ಬಂದು ಭೂಮಿ ಖರೀದಿಸುತ್ತಾರೆ. ಭೂಮಿಯ ಬೆಲೆ ಗಗನಕ್ಕೆ ಹೋಗುತ್ತಿದೆ .ಮುಂದೆ ದುಡ್ಡು ಕೊಟ್ಟರು ಭೂಮಿ ಸಿಗುವುದಿಲ್ಲ. ರೈತರೇ ಭೂಮಿ ಮಾರಬೇಡಿ ಎಂಬುದಾಗಿ ವಾಣಿವಿಲಾಸ ಸಾಗರ ಹೋರಾಟಸಮಿತಿ ಅಧ್ಯಕ್ಷರಾದ ಕಸವನಹಳ್ಳಿ ರಮೇಶ್ ರೈತರಿಗೆ ಮನವಿ ಮಾಡಿದರು.
ತಾಲ್ಲೂಕಿನ ವಾಣಿವಿಲಾಸಸಾಗರ ಜಲಾಶಯದ ಬಳಿ ಕಣಿವೆ ಮಾರಮ್ಮ ದೇವಿಗೆ ಪೂಜೆ ಸಲ್ಲಿಸಿ, ನಂತರ ಮೇಲ್ಭಾಗದಲ್ಲಿ ನಡೆದ ಆತ್ಮಾವಲೋಕನ ಹಾಗೂ ಸಂತೋಷಕೂಟ ಸಭೆಯನ್ನು ಉದ್ದೇಶಿಸಿ, ಅವರು ಮಾತನಾಡಿದರು.
ಈ ಭೂಮಿ ನಮ್ಮದಲ್ಲ ನಮ್ಮ ಪೂರ್ವಿಕರು ನಮಗೆ ಕೊಟ್ಟು ಹೋದ ಬಳುವಳಿ .ಇದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು, ಆದ್ದರಿಂದ ರೈತರು ಭೂಮಿಯನ್ನು ಮಾರಬಾರದು ಹಾಗೂ ಹೆಚ್ಚುವರಿ ನೀರನ್ನು ಬಳಸಿ ಭೂಮಿಯಸಾರವನ್ನು ಕಳೆದು ಬಂಜರು ಭೂಮಿಯಾಗಿ ಮಾಡಬಾರದು ಎಂದರಲ್ಲದೆ,

ಫೆಬ್ರವರಿ ತಿಂಗಳಲ್ಲಿ ಐಮಂಗಳ ಹೋಬಳಿಯ ಕೆರೆಗಳಿಗೆ ನೀರುಹರಿಸುವುದಾಗಿ ಹೇಳಿರುವ ಸರ್ಕಾರ ತುರ್ತಾಗಿ ನೀರನ್ನು ಕೇವಲ ಪ್ರಾಯೋಗಿಕವಾಗಿ ಹರಿಸದೆ ಸಾಮರ್ಥ್ಯದ ಶೇಕಡ 50 ಭಾಗವನ್ನು ತುಂಬಿಸಬೇಕು ಇದನ್ನು ಯಾವುದೇ ಕಾರಣಕ್ಕೂ ಮುಂದೆ ಹಾಕಬಾರದು ಹಾಗೂ ಕೇವಲ ಪ್ರಾಯೋಗಿಕವಾಗಿ ಹರಿಸಬಾರದು ಎಂದು ಹೇಳಿದರು.
ಎಸ್.ಬಿ.ಶಿವಕುಮಾರ್ ಮಾತನಾಡಿ, ಹೋರಾಟ ಸಮಿತಿ ಪ್ರಾಮಾಣಿಕವಾಗಿ ದಕ್ಷತೆಯಿಂದ ಕೆಲಸ ಮಾಡಿದ್ದರ ಫಲವಾಗಿ ವಾಣಿವಿಲಾಸ ಸಾಗರ ಮತ್ತು ಧರ್ಮಪುರ ಕೆರೆಗಳಿಗೆ ನೀರು ತುಂಬಿತು ಎಂದು ಹೇಳಿದರು.
ಈ ಸಭೆಯಲ್ಲಿ ಗೌರವಾಧ್ಯಕ್ಷ ಎಚ್.ಆರ್.ತಿಮ್ಮಯ್ಯ ಮಾತನಾಡಿ, ತುಂಗಾ ಕಾಮಗಾರಿಯನ್ನು ತುರ್ತಾಗಿ ಮುಗಿಸಬೇಕು, ಈ ನಿಟ್ಟಿನಲ್ಲಿ ನಾವೆಲ್ಲರೂ ಸರ್ಕಾರಕ್ಕೆ ಒತ್ತಡ ತರಬೇಕು ಎಂಬುದಾಗಿ ಹೇಳಿದರು.
ಈ ಸಭೆಯಲ್ಲಿ ವಾಣಿವಿಲಾಸ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಆಲೂರು ಸಿದ್ದರಾಮಣ್ಣ, ಖಜಾಂಚಿ ಸುರೇಶ್, ಮಂಜುನಾಥ್ ಮಾಳಿಗೆ, ಪಿಟ್ಲಾಲಿ ಶ್ರೀನಿವಾಸ್, ಶಫೀವುಲ್ಲಾ, ಮೇಷ್ಟ್ರು, ಬರ್ಕತ್ ಅಲಿ, ಆಸಿಫ್, ಆರ್.ಕೆ.ಗೌಡ್ರು, ನಾರಾಯಣಆಚಾರ್, ಎಸ್.ಜೆ.ಹನುಮಂತರಾಯ, ರಾಮಚಂದ್ರಕಸವನಹಳ್ಳಿ, ಕಲಾವತಿ, ರೈನ್ ಟ್ರಸ್ಟ್ ಕಾರ್ಯದರ್ಶಿ ಕಳ್ಳಿಹಟ್ಟಿ ಮಂಜುನಾಥ್, ಪರಿಸರವಾದಿ ಹೆಚ್.ಎಸ್.ಕೆ. ಸ್ವಾಮಿ, ಬೇಲಪ್ಪ, ಮಮತಾಕೃಷ್ಣಮೂರ್ತಿ, ಉಗ್ರಮೂರ್ತಿ, ಬಿ.ಕೆ.ರಾಜಪ್ಪ ಮೇಷ್ಟ್ರು, ಇತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಜಾನಪದ ಸಂಗೀತ, ಭೋಜನ ಕೂಟ ಏರ್ಪಡಿಸಲಾಗಿತ್ತು.
