
ಹಿರಿಯೂರು :
ಸವಿತಾ ಸಮಾಜದ ಮೂಲ ಪುರುಷ ಹಾಗೂ ಆರಾಧ್ಯ ದೈವವಾದ ಸವಿತಾ ಮಹರ್ಷಿಗಳು ಶಿವನ ದಿವ್ಯ ದೃಷ್ಟಿಯಿಂದ ಜನ್ಮ ತಳೆದರು ಎಂಬ ಪ್ರತೀತಿ ಇದ್ದು, ಸವಿತಾ ಮಹರ್ಷಿಗಳು ಜ್ಞಾನ, ಶಿಸ್ತು, ಶ್ರಮದಾಯಕ ಬದುಕಿನ ಸಂಕೇತವಾಗಿ ಪೂಜಿಸಲ್ಪಡುತ್ತಾರೆ ಎಂಬುದಾಗಿ ತಾಲ್ಲೂಕು ತಹಸೀಲ್ದಾರ್ ರಾದ ಎಂ.ಸಿದ್ದೇಶ್ ಅವರು ಹೇಳಿದರು.
ನಗರದ ತಾಲ್ಲೂಕುಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸವಿತಾ ಮಹರ್ಷಿಗಳ ಜಯಂತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಸವಿತಾ ಸಮಾಜವು ಅತ್ಯಂತ ಹಿಂದುಳಿದ ಸಮಾಜವಾಗಿದ್ದು, ಸಮಾಜದ ಶ್ರೇಯೋಭಿವೃದ್ಧಿಯಾಗಬೇಕಾದರೆ ಸವಿತಾ ಮಹರ್ಷಿ ಜಯಂತಿ ಆಚರಣೆಯಿಂದ ಮಾತ್ರ ಸಾಧ್ಯವಾಗಲಿದ್ದು, ಸವಿತಾ ಸಮಾಜವನ್ನು ಸಂಘಟಿಸಲು ಸಹಾಯಕವಾಗುತ್ತದೆ ಎಂಬುದಾಗಿ ಅವರು ಹೇಳಿದರು.
ಸಮಾಜದ ಮುಖಂಡರಾದ ಎನ್.ಬಸವರಾಜ್ ಅವರು ಮಾತನಾಡಿ, ಸವಿತಾ ಸಮಾಜವು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಸವಿತಾ ಸಮಾಜವನ್ನು ರಾಜ್ಯದ ಹಲವೆಡೆ ಬೇರೆ ಬೇರೆ ಹೆಸರುಗಳಿಂದ ಗುರುತಿಸಲಾಗುತ್ತಿದೆ. ನಮ್ಮ ಸಮಾಜದ ಮಕ್ಕಳು ಹೆಚ್ಚು ಹೆಚ್ಚು ಶಿಕ್ಷಣವಂತರಾಗಬೇಕು ಎಂದರಲ್ಲದೆ,
ಸವಿತಾ ಸಮಾಜವು ತನ್ನದೇ ಆದ ಭವ್ಯ ಪರಂಪರೆಯನ್ನು ಹೊಂದಿದ್ದು, ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಇನ್ನಷ್ಟು ಪ್ರಗತಿ ಸಾಧಿಸಬೇಕು, ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸುವ ಮೂಲಕ ಸವಿತಾ ಸಮಾಜದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಬೇಕು ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್, ಉಪತಹಸೀಲ್ದಾರ್ ತಿಪ್ಪೇಸ್ವಾಮಿ, ಉಪನ್ಯಾಸಕ ರಂಗಸ್ವಾಮಿ, ನಗರಸಭೆ ಆರೋಗ್ಯ ನಿರೀಕ್ಷಕರಾದ ಅನಿಲ್, ಶ್ರೀನಿವಾಸ್ ರೆಡ್ಡಿ, ಮುಖಂಡರಾದ ಧನಂಜಯ, ತಿಪ್ಪೇಸ್ವಾಮಿ, ನಿರಂಜನ್, ಮನೋಹರ್, ಪದ್ಮ, ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
