
ಹಿರಿಯೂರು:
ತಮಿಳುನಾಡು ಕುಂಚಿಟಿಗರಿಗೆ ಪ್ರಾರಂಭದಲ್ಲಿ ಎಲ್ಲರಿಗೂ ವಣಕ್ಕಂ ಎಂದು ಸಂಭೋಧಿಸಿ ತಮಿಳುನಾಡಿನ ಕುಂಚಿಟಿಗರು ತಮ್ಮ ಮೂಲ ಕುಲ ದೇವರ ದರ್ಶನ ಮಾಡಲು ಆಗಮಿಸಿರುವುದು ತುಂಬಾ ಸಂತೋಷ ಹಾಗೂ ತಾವುಗಳು ವೈವಾಹಿಕ ಸಂಬಂಧಗಳನ್ನು ಬೆಳೆಸಿಕೊಂಡು ಹೋಗಬೇಕು ಎಂಬುದಾಗಿ ವಿಧಾನಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಅವರು ಹೇಳಿದರು.
ತಾಲ್ಲೂಕಿನ ಹರಿಯಬ್ಬೆ ಗ್ರಾಮದಲ್ಲಿ ಚಿತ್ರದುರ್ಗ ಜಿಲ್ಲಾ ಕುಂಚಿಟಿಗರ ಸಂಘ ಹಾಗೂ ಹಿರಿಯೂರು ತಾಲ್ಲೂಕು ಕುಂಚಿಟಿಗರ ಸಂಘದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ತಮಿಳುನಾಡು ಕುಂಚಿಟಗರಿಗೆ ವೀಳ್ಯೆ ಸ್ವಾಗತ ಮತ್ತು ಸಾಧಕರಿಗೆ ಸನ್ಮಾನ ಹಾಗೂ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂಬಂಧ ತಮಿಳುನಾಡು ಕುಂಚಿಟಿಗರನ್ನು ಕರ್ನಾಟಕಕ್ಕೆ ಕರೆತರುವಲ್ಲಿ ಮುಖ್ಯ ಮಾತ್ರ ವಹಿಸಿರುವ ಅಳನೇಷನ್ ರಂಗಸ್ವಾಮಿ ಅವರನ್ನು ಕರ್ನಾಟಕ ತಮಿಳುನಾಡಿಗೆ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದಾಗಿ ತಿಳಿಸಿ ಅವರನ್ನು ಸ್ಮರಣೆ ಮಾಡಿಕೊಂಡರು.

ಈ ಸಂದರ್ಭದಲ್ಲಿ ಹರಿಯಬ್ಬೆ ಮತ್ತು ಹುಚ್ಚವ್ವನಹಳ್ಳಿಯಲ್ಲಿರುವ ಕುಂಚಿಟಿಗರ ಜಾಗದಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಲು ತಲಾ 3ಕೋಟಿ ಅನುದಾನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಲ್ಲದೆ, ವೈಯಕ್ತಿಕವಾಗಿಯೂ ಮತ್ತು ವಿಧಾನಪರಿಷತ್ ಅನುದಾನದಲ್ಲೂ ಕಟ್ಟಡ ನಿರ್ಮಿಸಲು ಸಹಾಯ ಮಾಡುವುದಾಗಿ ಅವರು ಭರವಸೆ ನೀಡಿದರು. ಇನ್ನೂ ಕುಂಚಿಟಿಗ ಸಮಾಜದ ಮೀಸಲಾತಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತದೆ ಎಂಬುದಾಗಿ ಅವರು ಹೇಳಿದರು.
ಜೆ.ಡಿ.ಎಸ್. ಮುಖಂಡರು ಹಾಗೂ ಸಣ್ಣನೀರಾವರಿ ಇಲಾಖೆಯ ನಿವೃತ್ತ ಮುಖ್ಯ ಎಂಜಿನಿಯರ್ ಎಂ.ರವೀಂದ್ರಪ್ಪ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ಕುಂಚಿಟಗರು ತಮ್ಮ ಕುಲದ ಉಳಿವಿಗಾಗಿ ದೆಹಲಿಯಿಂದ ಕರ್ನಾಟಕದ ಹುಲಿಗೊಂದಿಗೆ ಆಗಮಿಸಿ ಅಲ್ಲಿಂದ ನಂದನಹೊಸೂರು ಮೂಲಕ ಕರ್ನಾಟಕ ಪ್ರವೇಶ ಮಾಡಿದ್ದಾರೆ. ಇಲ್ಲಿಂದ ಹೊಸೂರಿನ ಮೂಲಕ ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳತ್ತಲೂ ವಲಸೆ ಹೋಗಿ ತಮ್ಮ ವೃತ್ತಿಜೀವನ ಆರಂಭಿಸಿದ್ದಾರೆ.
ಆದರೆ, ತಮಿಳುನಾಡಿನ ಕುಂಚಿಟಿಗರ ಮೂಲ ಕಟ್ಟಿಮನೆ, ಮನೆ ದೇವರುಗಳು ಇಂದಿಗೂ ಕರ್ನಾಟಕದ ಚಿತ್ರದುರ್ಗ, ತುಮಕೂರು ಜಿಲ್ಲೆಯಲ್ಲಿವೆ. ಹಾಗಾಗಿ ಅವರು ತಮ್ಮ ಕುಲದೇವತೆಗಳ ದರ್ಶನಕ್ಕಾಗಿ ಕರ್ನಾಟಕಕ್ಕೆ ವಲಸೆ ಬಂದಿರುವುದು ತುಂಬಾ ಸಂತೋಷದ ವಿಚಾರ ಎಂಬುದಾಗಿ ಅವರು ಹೇಳಿದರು.
ಜಿಲ್ಲಾ ಕುಂಚಿಟಿಗರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಹೆಂಜಾರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಕರ್ನಾಟಕ ಮತ್ತು ತಮಿಳುನಾಡು ಕುಂಚಿಟಿಗರು ಹೆಣ್ಣು-ಗಂಡುಗಳನ್ನು ಕೊಟ್ಟು ಮದುವೆ ಮಾಡಿಕೊಳ್ಳುವ ಮೂಲಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು ಎಂಬುದಾಗಿ ಅವರು ಹೇಳಿದರು.
ಮುಖ್ಯ ಇಂಜಿನಿಯರ್ ಅಳಗೇಶನ್ ರಂಗಸ್ವಾಮಿ ಸನ್ಮಾನ ಸ್ವೀಕರಿಸಿ ತಮಿಳುನಾಡಿನಲ್ಲಿರುವ ಕುಂಚಿಟಿಗ ಕುಲಗಳ ಮಾಹಿತಿ ನೀಡಿ ಮಾತನಾಡಿ ಭಾಷೆಯ ತೊಡಕಿಗಾಗಿ ಮದುವೆ ಕಾರ್ಯಗಳು ನಡೆಯುತ್ತಿಲ್ಲ. ಸಮಾಜದಲ್ಲಿ ತಾವು ಜಾಗೃತಿ ಮೂಡಿಸುತ್ತೇವೆ. ಕರ್ನಾಟಕದಲ್ಲೂ ಜಾಗೃತಿ ಮೂಡಿಸಿ, ಹೆಣ್ಣು ಮತ್ತು ಗಂಡು ಇಬ್ಬರೂ ಒಪ್ಪಿದರೆ ಖಂಡಿತ ಮದುವೆ ಕಾರ್ಯಗಳನ್ನು ಮಾಡೋಣ ಎಂಬುದಾಗಿ ಹೇಳಿದರು.

ವಿಶ್ರಾಂತ ಬಿ.ಬಿ.ಎಂ.ಪಿ.ಡೆಪ್ಯೂಟಿ ಕಮೀಷನರ್ ಬೇತೂರು ಪಾಳ್ಯ ಡಾ.ಜೆ.ರಾಜು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಜಿಲ್ಲಾ ಕುಂಚಿಟಿಗರ ಸಂಘದ ಅಧ್ಯಕ್ಷರಾದ ಜಿ.ಚಂದ್ರಯ್ಯಅಧ್ಯಕ್ಷತೆ ವಹಿಸಿದ್ದರು. ವಿ.ಕೆ.ಗುಡ್ಡದ ಶ್ರೀಹಾಲಪ್ಪಯ್ಯಸ್ವಾಮಿ ಮಠದ ಎಂ.ವಿ. ಚಂದ್ರಶೇಖರಯ್ಯ ಸಾನಿಧ್ಯ ವಹಿಸಿದ್ದರು. ಕುರುಬರಹಳ್ಳಿ ದೇವರಾಜ್ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿದರು. ಕೆ.ಜಿ.ಹನುಮಂತರಾಯ ಕಾರ್ಯಕ್ರಮ ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ವಿಶ್ರಾಂತ ಡೀನ್ ಪ್ರೊ.ಎಂ.ಜಿ.ಗೋವಿಂದಯ್ಯ, ಕೆ.ಬವಸಾವನಂದ, ಫ್ರೊ.ಮೈಸೂರುಶಿವಣ್ಣ, ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿ.ಎಸ್.ರಘುನಾಥ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಶ್ರೀಮತಿ ಅರುಣಾಪಟೇಲ್, ಕೆ.ಟಿ.ರುದ್ರಮುನಿ, ಸಿ.ಜಿ.ಚಿಕ್ಕಣ್ಣ, ಹೆಚ್.ಜಿ.ಗುಂಡಯ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

