
ಹಿರಿಯೂರು :
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಾಗೂ ಮಹಾರಾಣಿ ಕೆಂಪನಂಜಮಣಿ ಇವರು ಚಿತ್ರದುರ್ಗ ಜಿಲ್ಲೆಯ ಜನರಿಗೆ ವ್ಯವಸಾಯ ಮತ್ತು ಜಾನುವಾರುಗಳಿಗೆ ಕುಡಿಯ ನೀರಿನ ಸಲುವಾಗಿ ಜಲಾಶಯ ನಿರ್ಮಿಸಿದ ಈ ದಿನ ಒಂದು ಐತಿಹಾಸಿಕ ದಿನವಾಗಿದೆ, ಅದಕ್ಕಾಗಿ ಜಿಲ್ಲೆಯ ಎಲ್ಲಾ ರೈತರು ಒಟ್ಟಿಗೆ ಸೇರಿ ಈ ದಿನ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದೇವೆ ಎಂಬುದಾಗಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.
ಜಿಲ್ಲೆಯ ಎಲ್ಲಾ ತಾಲೂಕಿನ ರೈತ ಮುಖಂಡರು ಕಣಿವೆ ಮಾರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಾಣಿವಿಲಾಸ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಿದ ನಂತರ ದೇವಸ್ಥಾನದ ಸಮುದಾಯ ಭವನದಲ್ಲಿ ನಡೆಸಲಾದ ಸಭೆಯನ್ನು ಉದ್ದೇಶಿಸಿ, ಅವರು ಮಾತನಾಡಿದರು.

ಇನ್ನು ಮುಂದೆ ನಮ್ಮ ಜಿಲ್ಲೆಯ ಎಲ್ಲಾ ರೈತರು ಒಟ್ಟುಗೂಡಿ, ನೀರಾವರಿ ಹೋರಾಟವನ್ನು ತೀವ್ರವಾಗಿ ಹಮ್ಮಿಕೊಳ್ಳಬೇಕಾಗಿದೆ, ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ ಅಲ್ಲಿ ಘೋಷಣೆ ಮಾಡಿರುವ 5300 ಕೋಟಿ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕು ಮತ್ತು ರಾಜ್ಯ ಸರ್ಕಾರ 5000 ಕೋಟಿ ಹಣವನ್ನು ಈ ಬಜೆಟ್ ಅಧಿವೇಶನದಲ್ಲಿ ಮೀಸಲಾಡಬೇಕು ಮತ್ತು ಜಿಲ್ಲೆಯ ಎಲ್ಲಾ ಕೆರೆಗಳಿಗೂ ನೀರು ತುಂಬಿಸಬೇಕು ಎಂದು ಎಲ್ಲಾ ತಾಲೂಕು ಕಚೇರಿ ಮುಂಭಾಗದಲ್ಲಿ ಬರುವ 30ನೇ ತಾರೀಕು ದಿನದಿಂದ ಅನಿರ್ದಿಷ್ಟ ಚಳುವಳಿ ಹಮ್ಮಿಕೊಳ್ಳಲಾಗುವುದು
ಇದಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಜಿಲ್ಲೆಯ ಆರು ತಾಲೂಕುಗಳನ್ನು ಏಕಕಾಲದಲ್ಲಿ ಬಂದ್ ಮಾಡಿ ಸರ್ಕಾರಕ್ಕೆ ತೀವ್ರತರದ ಒತ್ತಡ ತರುವುದು ಇದಕ್ಕೂ ಸರ್ಕಾರಗಳು ಸ್ಪಂದಿಸದೆ ಇದ್ದರೆ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲಾಗುವುದು, ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ತಮ್ಮ ನಿರ್ಧಾರಗಳನ್ನು ತಿಳಿಸದಿದ್ದರೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಚಳುವಳಿ ಹಮ್ಮಿಕೊಳ್ಳಲು ಸಭೆಯಲ್ಲಿ ಒಮ್ಮತದ ತೀರ್ಮಾನ ಮಾಡಲಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟಸಿದ್ಧವೀರಪ್ಪನವರು ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ಇಲ್ಲದ ಸಬೂಬುಗಳನ್ನು, ಸುಳ್ಳು ಭರವಸೆಗಳನ್ನು ನೀಡುತ್ತಾ ಜಿಲ್ಲೆಯ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ, ಈ ಬಾರಿ ಚಳುವಳಿಯು ರೈತರಿಗೆ ಸಮರ್ಪಕವಾಗಿ ಸಮಗ್ರ ನೀರಾವರಿ ಮಾಡಬೇಕು ಎಂದು ಸರ್ಕಾರಗಳ ಮೇಲೆ ತೀವ್ರತರದ ಒತ್ತಡ ತರುವ ಹೋರಾಟವನ್ನು ಮಾಡಬೇಕು ಎಂದು ತಿಳಿಸಿದರು.
ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ಆಳುವ ಸರ್ಕಾರಗಳು ಒಂದಲ್ಲ ಒಂದು ರೀತಿ ಮೋಸ ಮಾಡುತ್ತಲೇ ಬಂದಿವೆ, ನೀರು ಬಂದರೆ ಮುಗಿಯುವುದಿಲ್ಲ, ಬೆಂಬಲ ಬೆಲೆ ಸ್ವಾಮಿನಾಥನ್ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಬೇಕು, ಆದ್ದರಿಂದ ಎಲ್ಲಾ ರೈತ ಸಂಘಟನೆಗಳು ಒಗ್ಗೂಡಿ ಹೋರಾಟ ಮಾಡಬೇಕು ಎಂದು ತಿಳಿಸಿದರು.
ಈ ಸಭೆಯಲ್ಲ್ಲಿ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಸವರೆಡ್ಡಿ, ಮೊಳಕಾಲ್ಮೂರು ನೀರಾವರಿ ಸಮಿತಿ ಅಧ್ಯಕ್ಷ ನಾಗರಾಜ್, ಹಿರಿಯೂರು ತಾಲೂಕು ಅಧ್ಯಕ್ಷ ಆಲೂರುಸಿದ್ದರಾಮಣ್ಣ, ಹೊಳಲ್ಕೆರೆ ತಾಲೂಕು ಅಧ್ಯಕ್ಷ ರಂಗಸ್ವಾಮಿ, ಹೊಸದುರ್ಗ ತಾಲ್ಲೂಕು ಅಧ್ಯಕ್ಷ ಚಿತ್ತಪ್ಪ, ಚಳ್ಳಕೆರೆ ತಾಲೂಕು ಅಧ್ಯಕ್ಷ ರಾಜಣ್ಣ, ಮೊಳಕಾಲ್ಮೂರು ತಾಲೂಕು ಅಧ್ಯಕ್ಷ ನಾಗರಾಜ್, ಜಿಲ್ಲಾ ಪದಾಧಿಕಾರಿಗಳಾದ ಬುಡ್ನಟ್ಟಿ ತಿಪ್ಪೇಸ್ವಾಮಿ, ಚನ್ನಕೇಶವಮೂರ್ತಿ, ವೀರಭದ್ರಪ್ಪ, ಜಯಣ್ಣ, ಬಸವರಾಜ್, ನಿರಂಜನ್ ಮೂರ್ತಿ, ಸಣ್ಣ ತಿಮ್ಮಣ್ಣ, ಜಯಣ್ಣ, ಶಿವಣ್ಣ, ರಂಗಸ್ವಾಮಿ, ಶ್ರೀಕಂಠಮೂರ್ತಿ, ಗೋವಿಂದರಾಜ್, ನಾಗರಾಜ್, ನಟರಾಜ್, ಹನುಮಂತಪ್ಪ, ಚಿಕ್ಕಣ್ಣ ಇತರರು ಭಾಗವಹಿಸಿದ್ದರು.

