
ಹಿರಿಯೂರು:
ಈ ಸಂಕ್ರಾಂತಿ ಹಬ್ಬದ ಸಂಭ್ರಮಾಚರಣೆಯು ಬದುಕಿನ ಕಹಿಯನ್ನು ಕಳೆದು, ಸಿಹಿಯ ಸಂಭ್ರಮ ತಂದು ಎಲ್ಲರ ಬಾಳಿನಲ್ಲಿ ಸಂತಸವನ್ನು ತರಲಿ ಎಂಬುದಾಗಿ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ರಾಜ್ಯ ನಿರ್ದೇಶಕರು ಹಾಗೂ ಸತ್ವ ಮಹಿಳಾ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಶಿಕಲಾರವಿಶಂಕರ್ ಅವರು ಹೇಳಿದರು.
ನಗರದ ಬಸವೇಶ್ವರ ಗುಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸೂರ್ಯನ ಉತ್ತರಾಯಣ ಪುಣ್ಯಕಾಲದ ಸಂಕ್ರಾಂತಿ ಹಬ್ಬದ ಸಂಭ್ರಮಾಚರಣೆಗೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು.
ರೈತರಿಗೆ ಸುಗ್ಗಿಯ ಹಬ್ಬವಾದ ಸಂಕ್ರಾಂತಿ ಹಬ್ಬದಂದು ಪರಸ್ಪರ ಎಳ್ಳು-ಬೆಲ್ಲ ಹಂಚುವ ಮೂಲಕ ಹೊಸ ಪೈರು, ರಾಶಿ ಹಾಕಿರುವ ಹೊಸ ಫಸಲು ಪೂಜಿಸಿ, ಕೃಷಿಕನ ಭಾಗ್ಯದ ಬಾಗಿಲು ತೆರೆಯುವ ಕಾಲ. ಹೆಣ್ಣುಮಕ್ಕಳು ಸಂಭ್ರಮದಿಂದ ಮನೆ,ಮನೆಗೆ ಹೋಗಿ ಎಳ್ಳುಬೆಲ್ಲ, ಕಬ್ಬು, ಸಕ್ಕರೆ ಅಚ್ಚು, ಬಾಳೆಹಣ್ಣು ಕೊಟ್ಟು ಶುಭ ಕೋರುವ ಹಬ್ಬವಾಗಿದೆ ಎಂಬುದಾಗಿ ಹೇಳಿದರು.
ಅಖಿಲಭಾರತ ವೀರಶೈವ ಲಿಂಗಾಯತ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ತ್ರಿವೇಣಿಸತೀಶ್ ಮಾತನಾಡಿ, ಅಖಿಲಭಾರತ ವೀರಶೈವ ಲಿಂಗಾಯತ ಮಹಿಳಾ ಘಟಕದ ಎಲ್ಲಾ ಕಾರ್ಯಕ್ರಮಗಳಿಗೆ ಹೆಣ್ಣು ಮಕ್ಕಳು ಸಂಘಟಿತರಾಗಿ ಬಂದು, ಭಾಗವಹಿಸುವುದು ತುಂಬಾಮುಖ್ಯ ಎಂಬುದಾಗಿ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಬಸವಶ್ರೀ ಭಜನಾಮಂಡಳಿಯ ಅಧ್ಯಕ್ಷರಾದ ವೀಣಾಉಮಾಶಂಕರ್ ರವರು ಆಶಯ ನುಡಿಗಳನ್ನಾಡಿದರು. ಭಾವನಾರವರು ಕಾರ್ಯಕ್ರಮ ನಿರೂಪಿಸಿದರು. ವಿಮಲಾ ಕಾಂತರಾಜ್ ರವರು ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ಸರ್ವಮಂಗಳಾ ಹಾಗೂ ಲತಾಶಿವಪ್ರಸಾದ್ ಸದಸ್ಯರಿಗೆ ಆಟೋಟ ಸ್ಪರ್ಧೆಗಳನ್ನು ನಡೆಸಿದರು.
ಈ ಕಾರ್ಯಕ್ರಮದಲ್ಲಿ ಅಖಿಲಭಾರತ ವೀರಶೈವ ಲಿಂಗಾಯತ ಮಹಿಳಾ ಘಟಕದ ಜಿಲ್ಲಾ ನಿರ್ದೇಶಕರಾದ ಶ್ಯಾಮಲಾ ಸತೀಶ್, ಉಪಾಧ್ಯಕ್ಷರಾದ ಶ್ರೀಮತಿಯಮುನಾಉಮಾಕಾಂತ್, ರತ್ನಮ್ಮ, ಜಂಟಿ ಕಾರ್ಯದರ್ಶಿಗಳಾದ ಲಲಿತಮ್ಮ, ನಿರ್ಮಲಾ ಮಹಂತೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

