
ಹಿರಿಯೂರು:
ಶ್ರೀ ಬಸವರಾಜ್ ಆಂಗ್ಲ ಮಾಧ್ಯಮ ಶಾಲೆಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಬೇಕಿರುವ ಎಲ್ಲಾ ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳನ್ನು ತುಂಬಾ ಅಚ್ಚುಕಟ್ಟಾಗಿ ನೀಡುವ ಮೂಲಕ ನಗರದಲ್ಲಿ ಅತ್ಯುತ್ತಮ ಶಾಲೆಯಾಗಿ ಬೆಳೆದಿದೆ ಎಂಬುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಸಿ.ಎಂ.ತಿಪ್ಪೇಸ್ವಾಮಿ ಅವರು ಹೇಳಿದರು.
ನಗರದ ಹೊರವಲಯದಲ್ಲಿರುವ ಶ್ರೀ ಬಸವರಾಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಎಕ್ಸಲೆನ್ಷಿಯ ಈವೆನಿಂಗ್ 2ಕೆ 26 ಎಂಬ ಘೋಷವಾಕ್ಯದಡಿಯಲ್ಲಿ ಜರುಗಿದ ಶಾಲಾ ವಾರ್ಷೀಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತರಲು ಆದಷ್ಟು ಮೊಬೈಲ್ ನಿಂದ ಮಕ್ಕಳನ್ನು ದೂರವಿಡುವ ಕೆಲಸವನ್ನು ಪೋಷಕರು ಮಾಡಬೇಕು. ಕಲಿಕೆಗೆ ಹೆಚ್ಚು ಒತ್ತು ನೀಡುವ ಮೂಲಕ ಉತ್ತಮ ಅಂಕಗಳನ್ನು ಪಡೆಯಲು ಮಕ್ಕಳಿಗೆ ಮಾರ್ಗದರ್ಶನ ನೀಡುವ ಕೆಲಸ ಮಾಡಬೇಕು ಎಂಬುದಾಗಿ ಹೇಳಿದರು.
ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಬಸವರಾಜ್ ಮಾತನಾಡಿ, ನಮ್ಮ ಶಾಲೆಯ ಪೋಷಕರು ಹಾಗೂ ವಿದ್ಯಾರ್ಥಿಗಳು ಈ ಶಾಲೆಯ ಮೇಲಿಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಾವು ಅಭಾರಿಗಳಾಗಿರುತ್ತೇವೆ, ಮುಂದೆಯೂ ನಿಮ್ಮ ಸಹಕಾರ ಪ್ರೋತ್ಸಾಹ ಹೀಗೆ ಇರಲಿ ಎಂಬುದಾಗಿ ಅವರು ಹೇಳಿದರು.
ಮುಖ್ಯ ಅತಿಥಿಗಳಾದ ಉಪಪೋಲಿಸ್ ವರಿಷ್ಠಾಧಿಕಾರಿ ಟಿ.ಎಂ.ಶಿವಕುಮಾರ್ ಮಾತನಾಡಿ, ಶಾಲಾ ವಾರ್ಷಿಕೋತ್ಸವದಲ್ಲಿ ನಿಮ್ಮ ಮಗು ವೇದಿಕೆಯ ಮೇಲೆ ನೃತ್ಯ ಮಾಡಿದಾಗ ನಿಮಗೆ ಸಿಗುವುದು ತಾತ್ಕಾಲಿಕ ಖುಷಿ, ಅದೇ ಮಗು ಇಂತಹ ಒಳ್ಳೆಯ ಶಾಲೆಗಳಲ್ಲಿ ಓದಿ ಉತ್ತಮ ಅಂಕಗಳಿಸಿದರೆ ನಿಮಗೆ ಸಿಗುವುದು ನಿಜವಾದ ಖುಷಿ, ಈ ನಿಟ್ಟಿನಲ್ಲಿ ನಿಮ್ಮ ಮಗುವನ್ನು ಬೆಳೆಸಬೇಕು ಎಂಬುದಾಗಿ ಪೋಷಕರಿಗೆ ಹೇಳಿದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಯುತ ಎಸ್.ಬಿ. ಸಚಿನ್ ಗೌಡ ಅವರು ಮಾತನಾಡಿ, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಜೊತೆಗೆ ಮೌಲ್ಯಯುತ ವ್ಯಕ್ತಿಯನ್ನಾಗಿ ಮಾಡುವುದೇ ನಮ್ಮ ಗುರಿಯಾಗಿದ್ದು, ಆ ನಿಟ್ಟಿನಲ್ಲಿ ನಮ್ಮ ಶಾಲೆ ಸದಾ ನಿಮ್ಮ ಬೆಂಬಲಕ್ಕೆ ನಿಲ್ಲುತ್ತದೆ ಎಂಬುದಾಗಿ ಪೋಷಕರಿಗೆ ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ವರದಿಯನ್ನು ಪ್ರಾಂಶುಪಾಲರಾದ ಶ್ರೀಮತಿ ರಮಿತಾರವರು ಮಂಡಿಸಿದರು. ಇಮ್ದಾದ್ ಉರ್ ರೆಹಮಾನ್, ಅಪರ್ಣ ನಿರೂಪಿಸಿದರು. ಶ್ರೀಮತಿ ಮೀನಾಬಾಲರಾಜ್ ಸ್ವಾಗತಿಸಿದರು. ಮಧುಕುಮಾರ್ ವಂದಿಸಿದರು. ಇದಾದ ನಂತರ ಮಕ್ಕಳಿಂದ ಮೂಡಿ ಬಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರ ಕಣ್ಮನ ತಣಿಸಿದವು. ವಿಶೇಷವಾಗಿ ಪೌರಾಣಿಕ ನೃತ್ಯ ರೂಪಕಗಳು ಮೈನವಿರೇಳಿಸುವಂತೆ ಮೂಡಿ ಬಂದು ಎಲ್ಲರ ಮೆಚ್ಚುಗೆಗೆ ಪಾತ್ರವಾದವು.
ಈ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕರಾದ ಸೈಯದ್ ಜಾಫರ್, ಟ್ರಸ್ಟಿಗಳಾದ ಶ್ರೀಮತಿ ಜ್ಯೋತಿ ಎನ್ ಎಸ್, ಶ್ರೀಮತಿ ಶಾಂಗ್ರೀಲಾ ಎಸ್. ಬಿ. ಶ್ರೀರಂಗಪ್ಪ,ಶ್ರೀಮತಿ ಶಾಂತಮ್ಮ ಹಾಗೂ ಬಸವರಾಜ್ ಅಲೈಡ್ ಹೆಲ್ತ್ ಸೈನ್ಸ್ ಹಾಗೂ ಅರೆ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಸಿ.ಸಂದೀಪ್ ಯಾದವ್ ಅವರು ಉಪಸ್ಥಿತರಿದ್ದರು.ಹಾಗೆಯೇ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

