
ಹಿರಿಯೂರು:
ನಗರದ ವೇದಾವತಿ ಬಡಾವಣೆಯ ಆಂಜನೇಯ ದೇವಸ್ಥಾನದ ಹತ್ತಿರ ಜನವರಿ 7 ರ ರಾತ್ರಿ ಎನ್ನುವವರ ಸ್ಕೂಟಿವಾಹನಕ್ಕೆ ಹಂದಿ ಅಡ್ಡ ಬಂದಿದ್ದರ ಪರಿಣಾಮವಾಗಿ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಗಾಯಗೊಂಡ ಕಿರಣ್ ರವರು ತುಮಕೂರಿನ ಶ್ರೀದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ಮನವಿ ಟ್ರಸ್ಟ್ ನ ಅಧ್ಯಕ್ಷೆ ಶ್ರೀಮತಿ ಮಾನಸಮಂಜುನಾಥ್ ಹೇಳಿದರು.
ನಗರದ ನಗರಸಭೆ ಸಭಾಂಗಣದಲ್ಲಿ ನಗರದಲ್ಲಿ ಹಂದಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ, ನಗರಸಭೆ ಪೌರಾಯುಕ್ತರಿಗೆ ಮನವಿಪತ್ರವನ್ನು ಸಲ್ಲಿಸಿ, ನಂತರ ಅವರು ಮಾತನಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪೌರಾಯುಕ್ತರಾದ ಎ.ವಾಸೀಂ ಅವರು ಸಂಜೆಯ ಒಳಗಾಗಿ ಹಂದಿ ಮಾಲೀಕರ ಸಭೆ ಕರೆದು, ತಕ್ಷಣವೇ ನಗರದಿಂದ ಹಂದಿಗಳನ್ನು ದೂರ ಸಾಗಿಸಲು ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಈ ಸಂದರ್ಭದಲ್ಲಿ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮನವಿ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಮತಿ ಮಾನಸ ಮಂಜುನಾಥ್,ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷರಾದ ರಾಮಚಂದ್ರಪ್ಪ, ಕಾರ್ಯಾಧ್ಯಕ್ಷರಾದ ರಾಘವೇಂದ್ರ, ಮಹಾನಾಯಕ ದಲಿತಸೇನೆಯ ತಾಲ್ಲೂಕು ಅಧ್ಯಕ್ಷರಾದ ರಾಘವೇಂದ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
