
ಹಿರಿಯೂರು :
ಸಾರ್ವಜನಿಕರಿಗೆ ಸಹಕಾರಿಯಾಗಲೆಂಬ ಉದ್ದೇಶದಿಂದ ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳಿಂದ ಪ್ರತಿ ತಿಂಗಳ ಎರಡನೇ ಬುಧವಾರದಂದು ಕಣ್ಣಿನ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ನಗರದ ನಾಗರೀಕರು ಈ ಕಣ್ಣಿನ ಆರೋಗ್ಯ ತಪಾಸಣೆ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂಬುದಾಗಿ ರೆಡ್ ಕ್ರಾಸ್ ಸಂಸ್ಥೆ ಚೇರ್ಮನ್ ಹೆಚ್.ಎಸ್.ಸುಂದರರಾಜ್ ಹೇಳಿದರು.

ನಗರದ ರೋಟರಿ ಸಭಾಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಿರಿಯೂರು ಶಾಖೆ, ರೋಟರಿ ಸಂಸ್ಥೆ ಹಿರಿಯೂರು, ಸರ್ವೋದಯ ಥಿಯೋಫಿಕಲ್ ಸೊಸೈಟಿ ಹಿರಿಯೂರು, ಲಯನ್ಸ್ ಹಾಸ್ಪಿಟಲ್ ಬೆಂಗಳೂರು, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮತ್ತು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಚಿತ್ರದುರ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರ ಮತ್ತು ಉಚಿತ ಮಸೂರ ಅಳವಡಿಕೆ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಮಾಜಸೇವಕಿ ಶ್ರೀಮತಿ ಶಶಿಕಲಾ ರವಿಶಂಕರ್ ಮಾತನಾಡಿ, ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳು ಸಾರ್ವಜನಿಕರ ಆರೋಗ್ಯ ಸುರಕ್ಷತೆಗಾಗಿ ಹಲವಾರು ಜನಸೇವಾ ಆರೋಗ್ಯ ಶಿಬಿರಗಳನ್ನು ನಡೆಸಿಕೊಂಡು ಬಂದಿದ್ದು, ಜನಸಾಮಾನ್ಯರಿಗೆ ಉತ್ತಮ ಆರೋಗ್ಯವನ್ನು ಕಲ್ಪಿಸಿಕೊಡುವುದೇ ಈ ಸಂಸ್ಥೆಗಳ ಮುಖ್ಯ ಧ್ಯೇಯವಾಗಿದೆ ಎಂಬುದಾಗಿ ಹೇಳಿದರು.

ರೋಟರಿ ಮಾಜಿ ಅಧ್ಯಕ್ಷರಾದ ಎಲ್.ಆನಂದಶೆಟ್ಟಿ ಮಾತನಾಡಿ, ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ದಾನಿಗಳ ಸಹಕಾರವೇ ಕಾರಣವಾಗಿದ್ದು, ಆರೋಗ್ಯ ಶಿಬಿರಗಳಿಗೆ ದಾನಿಗಳು ನೆರವು ನೀಡುತ್ತಿರುವುದರಿಂದ ನಮ್ಮ ಸಂಸ್ಥೆಗಳು ಜನಸೇವೆಯನ್ನು ಮಾಡಲು ಸಾಧ್ಯವಾಗುತ್ತಿದೆ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಖಜಾಂಚಿ ಸಣ್ಣಭೀಮಣ್ಣ, ಸಿ.ನಾರಾಯಣಾಚಾರ್, ಶ್ರೀಮತಿ ನಾಗಸುಂದರಮ್ಮ, ಲಯನ್ಸ್ ಆಸ್ಪತ್ರೆ ನೇತ್ರ ವೈದ್ಯರು ಹಾಗೂ ಸಿಬ್ಬಂದಿಗಳು, ರೆಡ್ ಕ್ರಾಸ್ ಮಹಿಳಾ ನಿರ್ದೇಶಕರುಗಳು, ರೆಡ್ ಕ್ರಾಸ್ ಹಾಗೂ ರೋಟರಿ ಸಂಸ್ಥೆಯ ನಿರ್ದೇಶಕರುಗಳು ಉಪಸ್ಥಿತರಿದ್ದರು.
