March 2, 2026
00001

ಹಿರಿಯೂರು:

2025-2026 ವಾರ್ಷಿಕ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಉತ್ತಮ ಫಲಿತಾಂಶ ತರಬೇಕು ಎಂಬುದಾಗಿ  ಪ್ರೌಢಶಾಲಾ ಶಿಕ್ಷಕರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಹೇಳಿದರು.

ನಗರದ ರೋಟರಿ ಭವನದಲ್ಲಿ  ಹಮ್ಮಿಕೊಳ್ಳಲಾಗಿದ್ದ  ಪ್ರೌಢಶಾಲಾ  ಮುಖ್ಯ ಶಿಕ್ಷಕರ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಶಿಕ್ಷಣಕ್ಕಾಗಿ  ಸರ್ಕಾರ  ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಸರ್ಕಾರಿ  ಶಾಲೆಯಲ್ಲಿ ಬಡಮಕ್ಕಳೇ ಹೆಚ್ಚಾಗಿ  ವಿದ್ಯಾಭ್ಯಾಸ  ಮಾಡುತ್ತಿದ್ದಾರೆ.  ಪ್ರೌಢಶಾಲಾ ಶಿಕ್ಷಕರು  ಕಲಿಕೆಯಲ್ಲಿ  ಹಿಂದುಳಿದ ಮಕ್ಕಳ ಬಗ್ಗೆ  ಹೆಚ್ಚಿನ ಗಮನಹರಿಸಿ  ಉತ್ತಮ  ಫಲಿತಾಂಶ  ಪಡೆಯುವ ನಿಟ್ಟಿನಲ್ಲಿ  ಕಾರ್ಯನಿರ್ವಹಿಸಬೇಕು ಎಂಬುದಾಗಿ ಅವರು ಹೇಳಿದರು.

ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ.ಆಕಾಶ್ ಅವರು ಮಾತನಾಡಿ ಕಳೆದ ಸಾಲಿನಲ್ಲಿ ಕಡಿಮೆ ಫಲಿತಾಂಶ  ಪಡೆದ 100 ಶಾಲೆಗಳನ್ನು ಗುರುತಿಸಲಾಗಿದೆ. ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರದಿದ್ದರೆ ಸೂಕ್ತ ಶಿಸ್ತು ಕ್ರಮ ಜರುಗಿಸಲಾಗುವುದು ಎಂಬುದಾಗಿ ಅವರು ಹೇಳಿದರು.

ಖಾಸಗಿ ಅನುದಾನಿತ  ಕಡಿಮೆ ಕಾರ್ಯಭಾರ ಶಿಕ್ಷಕರನ್ನು  ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ  ಈಗಾಗಲೇ  ನಿಯೋಜನೆ ಮಾಡಿದ್ದು,  ವಿದ್ಯಾರ್ಥಿಗಳ ಪಾಠ ಪ್ರವಚನಕ್ಕೆ ಕೊರತೆ ಆಗದಂತೆ  ನಿಗಾ ವಹಿಸಲಾಗಿದೆ ಎಂಬುದಾಗಿ  ಅವರು ಹೇಳಿದರು.

ಬಿ.ಇ.ಒ. ಸಿ.ಎಂ.ತಿಪ್ಪೇಸ್ವಾಮಿ ಅವರು ತಾಲ್ಲೂಕಿನಲ್ಲಿ 80 ಇಲಾಖೆಯ ಪ್ರೌಢಶಾಲೆಗಳಿದ್ದು, ಶಿಕ್ಷಣ ಮೇಲಾಧಿಕಾರಿಗಳ  ಆದೇಶದಂತೆ ತಾಲ್ಲೂಕು ಕ್ರಿಯಾಯೋಜನೆಯಂತೆ  ತಾಲ್ಲೂಕಿನ ಎಲ್ಲಾ ಪ್ರೌಢಶಾಲೆಗಳಲ್ಲಿ  ಕಲಿಕೆಯಲ್ಲಿ ಹಿಂದುಳಿದ   ಮಕ್ಕಳಿಗೆ ಹೆಚ್ಚಿನ ಶ್ರಮ ವಹಿಸಿ  ಕಲಿಸಲಾಗುತ್ತಿದೆ.

ನಾಲ್ಕು ಮಾದರಿ ಪ್ರಶ್ನೆಪತ್ರಿಕೆಗಳನ್ನು  ತಯಾರಿಸಿ ಮಕ್ಕಳಿಗೆ ಅಭ್ಯಾಸ  ಮಾಡಿಸುವ ಮೂಲಕ ಯಾವುದೇ ಮಗು ಅನುತ್ತೀರ್ಣವಾಗದಂತೆ  ಕ್ರಮವಹಿಸಲಾಗುತ್ತಿದೆ. ಜನವರಿಯಿಂದಲೇ ತಾಲ್ಲೂಕಿನಲ್ಲಿ ವಿಶೇಷ ತರಗತಿಗಳನ್ನು ಆರಂಭಿಸಿ ಮಕ್ಕಳ ಫಲಿತಾಂಶಕ್ಕಾಗಿ ಶ್ರಮಿಸಬೇಕು ಎಂಬುದಾಗಿ ಅವರು ಹೇಳಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಇ.ಒ.ಪ್ರಮೋದ್, ಡಯಟ್ ಹಿರಿಯ ಉಪನ್ಯಾಸಕ ಪ್ರಸಾದ್, ತಾಲ್ಲೂಕು ಅಕ್ಷರ ದಾಸೋಹ ನಿರ್ದೇಶಕ ಮಹೇಶ್ವರರೆಡ್ಡಿ, ನೋಡಲ್ ಅಧಿಕಾರಿ ನಾಗರಾಜು,   ಶಿಕ್ಷಣ ಸಂಯೋಜಕ ಪುಟ್ಟಸ್ವಾಮಿ, ರಂಗಸ್ವಾಮಿ ಸೇರಿದಂತೆ ತಾಲ್ಲೂಕಿನ ಎಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರು  ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *