March 2, 2026
0003

ಹಿರಿಯೂರು:

ಪುನಶ್ಚೇತನ ದಿನವೇ ಸುಮಾರು 150ಕ್ಕೂ ಹೆಚ್ಚು ಲೀಟರ್ ಹಾಲು ಶೇಖರಣೆಯಾಗಿರುವುದು ಸಂತಸ ತಂದಿದೆ. ಹಾಲಿನ ಗುಣಮಟ್ಟ ಹೆಚ್ಚಿಸುವ ಜವಬ್ದಾರಿ ರೈತನದ್ದಾಗಿದೆ. ಡೈರಿಗೆ ನೀಡುವ ಹಾಲು ಗುಣಮಟ್ಟ ಇದ್ದಲ್ಲಿ. ಉತ್ಪಾದಕರಿಗೆ ಉತ್ತಮ ಬೆಲೆ ಸಿಗುತ್ತದೆ ಎಂಬುದಾಗಿ   ಶಿಮುಲ್ ನಿರ್ದೇಶಕರಾದ ಬಿ.ಸಿ. ಸಂಜೀವಮೂರ್ತಿ ಅವರು ಹೇಳಿದರು.

ತಾಲ್ಲೂಕಿನ  ಯಲ್ಲದಕೆರೆ ಗ್ರಾಮದಲ್ಲಿ ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ಹಾಲಿನ ಡೈರಿಯ ಪುನಶ್ಚೇತನಕ್ಕೆ  ಚಾಲನೆ ನೀಡಿ ಅವರು  ಮಾತನಾಡಿದರು.

ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರ ಸಂಘಗಳು ಉತ್ತಮವಾಗಿ ನಡೆಯುತ್ತಿದೆ. ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯ ನಿರ್ವಹಿಸಿದರೆ ಆ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ. ಹಾಲಿನ ಡೇರಿಗಳಲ್ಲಿ ರಾಜಕೀಯಕ್ಕೆ ಅವಕಾಶ ಕಲ್ಪಿಸದೆ, ಹಾಲಿನ ಡೇರಿಗಳನ್ನು ದೇವಾಲಯ ಎಂದು ಭಾವಿಸಿದರೆ ಡೇರಿಯಲ್ಲಿ ಯಾವುದೇ ಅವ್ಯವಹಾರ ನಡೆಯುವುದಿಲ್ಲ ಎಂಬುದಾಗಿ ಅವರು ಹೇಳಿದರು.

ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರ ಸಂಘದ ಅಭಿವೃದ್ಧಿಗೆ  ಎಲ್ಲಾ ರೀತಿಯ ಸಹಕಾರ  ನೀಡಲಾಗುವುದು. ಶಿಮುಲ್ ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಸಂಘವನ್ನು ಅಭಿವೃದ‍್ಧಿಯತ್ತ ಕೊಂಡೊಯ್ಯಬೇಕು ಎಂಬುದಾಗಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಚಳ್ಳಕೆರೆ ಉಪವಿಭಾಗಾಧಿಕಾರಿ ಎಂ.ಪುಟ್ಟರಾಜು, ಮಾರ್ಗ ವಿಸ್ತರಣಾಧಿಕಾರಿ ಕೃಷ್ಣಕುಮಾರ್, ಯಲ್ಲದಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಚಂದ್ರಮ್ಮ, ಉಪಾಧ್ಯಕ್ಷೆ ಲಕ್ಷ್ಮೀದೇವಿ, ಆಡಳಿತ ಮಂಡಳಿಯ ನಿರ್ದೇಶಕರಾದ ತಿಪ್ಪೇಸ್ವಾಮಿ, ಕೃಷ್ಣಮೂರ್ತಿ, ಲಲಿತಮ್ಮ, ಕರಿಯಪ್ಪ, ಚಂದ್ರಮ್ಮ, ರೇಣುಕಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *