
ಹಿರಿಯೂರು:
ಹೊರ ರಾಜ್ಯಗಳಿಗಿರುವಂತೆ ನಮ್ಮ ಕರ್ನಾಟಕ ರಾಜ್ಯದಲ್ಲೂ ಸಹ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗೀನ್ ನೀಡುವ ಜೊತೆಗೆ ನೋದಣಿ ಆಗುವ ಎಲ್ಲಾ ದಸ್ತಾವೇಜುಗಳಿಗೆ ಕಡ್ಡಾಯವಾಗಿ ಪತ್ರ ಬರಹಗಾರರ ಅಥವಾ ವಕೀಲ ಬಿಕ್ಕಲಂ ಕಡ್ಡಾಯಗೊಳಿಸಿ, ಪತ್ರಬರಹಗಾರರಿಗೆ ಸರ್ಕಾರದ ಏಕರೂಪ ಅಧಿಕೃತ ಗುರುತಿನ ಚೀಟಿ ನೀಡಬೇಕು ಎಂಬುದಾಗಿ ತಾಲ್ಲೂಕು ದಸ್ತಾವೇಜು ಬರಹಗಾರರ ಸಂಘದ ಅಧ್ಯಕ್ಷರಾದ ದೇವರಾಜು ಹೇಳಿದರು.
ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ದಸ್ತಾವೇಜು ಬರಹಗಾರರ ಸಂಘದ ವತಿಯಿಂದ ಪತ್ರಬರಹಗಾರರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಹಿರಿಯ ಉಪನೊಂದಣಾಧಿಕಾರಿಗಳ ಕಚೇರಿ ಮುಂಭಾಗ ಲೇಖನಿ ಸ್ಥಗಿತ ಧರಣಿ ನಡೆಸಲು ಅನುಮತಿ ನೀಡುವಂತೆ ತಾಲ್ಲೂಕು ಹಿರಿಯ ಉಪನೋಂದಣಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿ ಅವರು ಮಾತನಾಡಿದರು.

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಒಂದು ವರ್ಷದಿಂದಲೂ ಪತ್ರ ಬರಹಗಾರರ ಬೇಡಿಕೆಗಳಿಗೆ ಸಂಬಂಧಪಟ್ಟ ಇಲಾಖೆಗೆ ಮತ್ತು ಸಂಬಂಧಪಟ್ಟ ಸಚಿವರುಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದು, ಪತ್ರ ಬರಹಗಾರರ ಬೇಡಿಕೆಗಳಾದ ಹೊರ ರಾಜ್ಯಗಳಿಗಿರುವಂತೆ ನಮ್ಮ ಕರ್ನಾಟಕ ರಾಜ್ಯದಲ್ಲೂ ಸಹ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗೀನ್ ನೀಡುವುದು.
ಪತ್ರ ಬರಹಗಾರರ ಉಳಿವಿನ ಬಗ್ಗೆ ಮತ್ತು ಪತ್ರ ಬರಹಗಾರರ ಬೇಡಿಕೆಗಳ ಈಡೇರಿಕೆ ಬಗ್ಗೆ “ ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ” ಪಡೆದ ತಾಲ್ಲೂಕು ಪತ್ರಬರಹಗಾರರ ಸಂಘದ ವತಿಯಿಂದ ಡಿಸೆಂಬರ್ 16ರಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮನವಿ ಮಂಡನೆ ಮಾಡಬೇಕು,
ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವ ಉದ್ದೇಶವಾಗಿ ಬೆಳಗಾವಿಯ ಸುವರ್ಣಸೌಧದ ಮುಂದೆ ಧರಣಿ ಕೂರುವುದು ಮತ್ತು ಸುವರ್ಣ ಸೌಧದಲ್ಲಿ ಸಂಬಂಧಪಟ್ಟ ಸಚಿವರಿಗೆ ಮತ್ತೊಮ್ಮೆ ಮನವಿ ಸಲ್ಲಿಸಲು ಬೇಡಿಕೆ ಈಡೇರಿಸಲು ಒತ್ತಾಯಿಸುವುದು, ಈ ಬಗ್ಗೆ ಸಂಘದ ವತಿಯಿಂದ ಡಿಸೆಂಬರ್ 16ರಂದು ಬೆಳಗಾವಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ವಿಚಾರವನ್ನು ರಾಜ್ಯದ ಎಲ್ಲಾ ಪತ್ರ ಬರಹಗಾರರುಗಳಿಗೆ ಈಗಾಗಲೇ ಸಂಘದಿಂದ ಮನವರಿಕೆ ಮಾಡಲಾಗಿದೆ ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ದಸ್ತಾವೇಜು ಬರಹಗಾರರ ಸಂಘದ ಅಧ್ಯಕ್ಷರಾದ ದೇವರಾಜು, ಕಾರ್ಯದರ್ಶಿ ಜಿ.ಎನ್.ವೀರೇಶ್, ಗೌರವಾಧ್ಯಕ್ಷ ಬಿ.ಆರ್.ಜಗದೀಶ್, ಉಪಾಧ್ಯಕ್ಷ ಬಿ.ಎಂ.ಶಿವಣ್ಣ, ಖಜಾಂಚಿ ಕುಮಾರಸ್ವಾಮಿ, ಸಹಕಾರ್ಯದರ್ಶಿ ನಾಗರಾಜ್, ಸಂಚಾಲಕರಾದ ಸುಧಾಕರ್, ಅಬ್ದುಲ್ ರಹೀಂ, ನಿರ್ದೇಶಕರಾದ ಮಲ್ಲಚಾರಪ್ಪ, ಉಮೇಶ್, ರಾಜಶೇಖರ್, ಶಶಿಧರ್, ರಮೇಶ್, ಸೆಲ್ವರಾಜ್, ದಾದಾಪೀರ್, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
