
ಹಿರಿಯೂರು:
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಾಷ್ಟ್ರೀಯ ಹೆದ್ದಾರಿಗೆ ಸಮಾನಾಂತರವಾಗಿ ನಿರ್ಮಿಸಿರುವ ಸರ್ವೀಸ್ ರಸ್ತೆ ಹೆಸರಿಗಷ್ಟೇ ದ್ವಿಪಥವಾಗಿದ್ದು, ಅತ್ಯಂತ ಕಿರಿದಾಗಿದೆ. ಈ ಸರ್ವೀಸ್ ರಸ್ತೆಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಯಾವುದೇ ಸೌಲಭ್ಯ ನೀಡಿಲ್ಲ.
ಸರ್ವೀಸ್ ರಸ್ತೆಯ ಬದಿಯಲ್ಲಿ ಘನ ತ್ಯಾಜ್ಯ ತಂದು ಸುರಿಯುತ್ತಿದ್ಧಾರೆ. ಕಸ, ಕಡ್ಡಿ, ಹಳೆ ಮನೆ ಕಿತ್ತ ಮಣ್ಣ ಕಲ್ಲು, ಕಸ, ಕಡ್ಡಿ ಹಾಕುವ ತಾಣವಾಗಿ ಸರ್ವೀಸ್ ರಸ್ತೆ ಬದಿ ಮಾರ್ಪಟ್ಟಿದೆ ಎಂಬುದಾಗಿ ಸಾರ್ವಜನಿಕರು ಆಪಾದಿಸಿದ್ದಾರೆ.

ಇನ್ನೂ ಸರ್ವೀಸ್ ರಸ್ತೆಯ ಬದಿಯಲ್ಲಿ ಸೀಮೆ ಜಾತಿ ಗಿಡ-ಮರಗಳು ಬೆಳೆದು ಸಾಕಷ್ಟು ಅನಾಹುತ ಸೃಷ್ಠಿಸುತ್ತಿದ್ದರೂ ಹೆದ್ದಾರಿ ಪ್ರಾಧಿಕಾರದಅಧಿಕಾರಿಗಳು ಗಮನ ನೀಡುತ್ತಿಲ್ಲ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳ ಕೆಲಸ ಎಂದರೆ ಬರೀ ಹೆದ್ದಾರಿಯಲ್ಲಿ ಓಡಾಡುವ ವಾಹನಗಳ ಟೋಲ್ ಸಂಗ್ರಹಕ್ಕೆ ಮಾತ್ರ ಸೀಮಿತ ಎನ್ನುವಂತಾಗಿರುವುದು ಪ್ರಯಾಣಿಕರ ದುರ್ದೈವವಾಗಿದೆ.
ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ, ಸ್ಥಳೀಯ ನಿವಾಸಿಗಳು ಮತ್ತು ಸಣ್ಣ ವ್ಯಾಪಾರಿಗಳ ಅನುಕೂಲಕ್ಕಾಗಿ ನಿರ್ಮಿಸಲಾಗುತ್ತದೆ. ಇದರಿಂದ ವೇಗದ ವಾಹನ ಸಂಚಾರಕ್ಕೆ ಅಡ್ಡಿಯಾಗುವುದಿಲ್ಲ.
ಅಲ್ಲದೆ, ಹೆದ್ದಾರಿಯಲ್ಲಿ ವಾಹನ ದಟ್ಟಣೆ ಕಡಿಮೆಯಾಗಿ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತದೆ ಎನ್ನುವ ಭಾವನೆ ಮಾಯವಾಗಿದ್ದು, ಸಾರ್ವಜನಿಕರಲ್ಲಿ ಸರ್ವೀಸ್ ರಸ್ತೆ ಸಾಕಷ್ಟು ಸಮಸ್ಯೆಯನ್ನು ತಂದೊಡ್ಡಿದೆ.

ಹೆದ್ದಾರಿಯ ಮುಖ್ಯರಸ್ತೆಗಳನ್ನು ಬಳಸದೆ ಸ್ಥಳೀಯ ವಾಹನಗಳು, ದ್ವಿಚಕ್ರ ವಾಹನಗಳು ಮತ್ತು ಪಾದಾಚಾರಿಗಳು ಸಂಚರಿಸುವ ಸಲುವಾಗಿ ನಿರ್ಮಿಸಿದ್ದರೂ ಅದು ಉಪಯೋಗಕ್ಕೆ ಬಾರದ ರೀತಿಯಲ್ಲಿ ನಿರ್ಮಿಸಲಾಗಿದೆ.
ಹೆದ್ದಾರಿಗೆ ಸೇರಲು ಅಥವಾ ಹೆದ್ದಾರಿಯಿಂದ ಹೊರಬರಲು ಸುರಕ್ಷಿತ ಸ್ಥಳ ಒದಗಿಸುವುದು ಹೆದ್ದಾರಿ ಪ್ರಾಧಿಕಾರದ ಆದ್ಯ ಕರ್ತವ್ಯ. ರೈತರ ಅನುಕೂಲಕ್ಕಾಗಿ ಸರ್ವೀಸ್ ರಸ್ತೆ ನಿರ್ಮಿಸಲಾಗಿದೆ.
ಅಲ್ಲದೆ, ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಲಾಗಿರುವ ಸರ್ವೀಸ್ ರಸ್ತೆಗಳು, ಕೆಳಸೇತುವೆ, ಪಾದಾಚಾರಿಗಳ ದಾರಿ ನಿರ್ಮಾಣವು ಅವೈಜ್ಞಾನಿಕವಾಗಿದೆ. ಕೆಳ ಸೇತುವೆಗಳು ಅಕ್ರಮ ಚಟುವಟಿಕೆಗಳ ನಡೆಯುವ ತಾಣವಾಗಿವೆ.
ಹೆದ್ದಾರಿಪಕ್ಕದ ನಗರ, ಬಡಾವಣೆ, ಗ್ರಾಮಗಳ ಜನತೆ ಸರ್ವೀಸ್ ರಸ್ತೆಗಳಿಂದ ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ. ಹೆದ್ದಾರಿ ಪ್ರಾಧಿಕಾರವು ಪ್ರಯಾಣಿಕರು, ಸಾರ್ವಜನಿಕರ ದೂರುಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ.
ಅಲ್ಲದೆ, ಸರ್ವೀಸ್ ರಸ್ತೆ ಬದಿ ಇರುವ ಘನತ್ಯಾಜ್ಯ ವಿಲೇವಾರಿ ಮಾಡಿಸಬೆಕು. ಸರ್ವೀಸ್ ರಸ್ತೆಯಲ್ಲಿನ ತಗ್ಗುಗುಂಡಿಗಳನ್ನು ಮುಚ್ಚಬೇಕು. ಅಲ್ಲಿಯ ತನಕ ಟೋಲ್ ವಸೂಲಾತಿ ಸ್ಥಗಿತಮಾಡಬೆಕು ಎಂಬುದಾಗಿ ಸಾರ್ವಜನಿಕರು ಆಗ್ರಹ ಮಾಡಿದ್ದಾರೆ.
ವರದಿ-ಎಂ.ಎಲ್.ಗಿರಿಧರಮಲ್ಲಪ್ಪನಹಳ್ಳಿ

