
ಹಿರಿಯೂರು :
ಭದ್ರಾ ಮೇಲ್ದಂಡೆ ಕಾಮಗಾರಿಯು ಸಂಪೂರ್ಣ ಸ್ಥಗಿತಗೊಂಡಿದೆ ಸರ್ಕಾರದಿಂದ ಹಿಂದೆ ಮಾಡಿರುವ ಕಾಮಗಾರಿಗೆ ಹಣ ಪಾವತಿ ಮಾಡದೇ ಇರುವುದರಿಂದ ಗುತ್ತಿಗೆದಾರರು ಕಾಮಗಾರಿ ನಡೆಸುತ್ತಿಲ್ಲ ಸರ್ಕಾರ ಬಜೆಟ್ ಅಲ್ಲಿ ಬಿಡುಗಡೆಯಾದ ಹಣವನ್ನು ಎತ್ತಿನ ಯೋಜನೆಗೆ ವರ್ಗಾಯಿಸಿದ್ದಾರೆ ಎಂದು ಗುತ್ತಿಗೆದಾರರೊಬ್ಬರು ಮಾಹಿತಿ ನೀಡಿದ್ದಾರೆ, ಇದು ನಿಜಕ್ಕೂ ವಿಷಾದನೀಯ ಸಂಗತಿಯಾಗಿದೆ ಎಂಬುದಾಗಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.
ನಗರದ ರೈತ ಸಂಘದ ಕಚೇರಿಯಲ್ಲಿ ರೈತಮುಖಂಡರುಗಳಿಗೆ ಕರೆಯಲಾಗಿದ್ದ ಮಾಸಿಕ ಸಭೆಯನ್ನು ಉದ್ದೇಶಿಸಿ, ನಂತರ ಅವರು ಮಾತನಾಡಿದರು.

ಕೇಂದ್ರ ಸರ್ಕಾರವು ಕೂಡ 5,300 ಕೋಟಿ ಹಣವನ್ನು ಬಿಡುಗಡೆ ಮಾಡದೇ ಬೇರೆ ಕಾಮಗಾರಿಗೆ ಬಳಸಿದ್ದಾರೆ ಎಂದು ಮಾಹಿತಿ ಬಂದಿದೆ, ಹೀಗೆ ಆದರೆ ಮುಂದೆ ನಮ್ಮ ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಆಗುವುದಿಲ್ಲ, ಆದ್ದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿತರಾಗಿ ಜನವರಿ ಒಂದರಿಂದ ಆರು ತಾಲೂಕಿನಲ್ಲಿ ಧರಣಿ ಪ್ರಾರಂಭಿಸಬೇಕು,
ಮುಂದಿನ ದಿನಗಳಲ್ಲಿ ಸುಮಾರು 5000ಕ್ಕೂ ಹೆಚ್ಚು ಜನ ವಿಧಾನಸೌಧಕ್ಕೆ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡು, ಸರ್ಕಾರದ ಮೇಲೆ ಒತ್ತಡ ತರಬೇಕಾಗಿದೆ ಮತ್ತು ಹೊಸದುರ್ಗ ತಾಲ್ಲೂಕಿನ ಶಾಸಕರಾದ ಗೋವಿಂದಪ್ಪನವರು, ನಿನ್ನೆ ಪತ್ರಿಕೆ ಹೇಳಿಕೆಯಲ್ಲಿ ನೀಡಿರುವ ಪ್ರಕಾರ ಈ ತಿಂಗಳ ಅಂತ್ಯದೊಳಗಾಗಿ ಕ್ರಸ್ ಗೇಟ್ ಅಳವಡಿಸಲು ಕಾಮಗಾರಿ ಪ್ರಾರಂಭಿಸುತ್ತೇವೆ ಎಂದು ಹೇಳಿರುತ್ತಾರೆ
ಈ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಮಾಡಲು ಹಿರಿಯೂರು ತಾಲೂಕು ಚಿತ್ರದುರ್ಗ ಜಿಲ್ಲೆ ರೈತರು ಬಿಡುವುದಿಲ್ಲ ಶಾಸಕರು ಇದಕ್ಕೆ ಖರ್ಚು ಮಾಡುವ 224 ಕೋಟಿ ಹಣವನ್ನು ಕೆರೆಗಳಿಗೆ ನೀರು ತುಂಬಿಸಲು ಯೋಜನೆ ರೂಪಿಸಬೇಕು ಮತ್ತು ಇಂದು ಮೆಕ್ಕೆಜೋಳ ಬೆಂಬಲ ಬೆಲೆಯಲ್ಲಿ ಖರೀದಿಸಲು ಗುಬ್ಬಿ ತಾಲೂಕಿನ ಕಾರ್ಖಾನೆಗೆ ರೈತರೇ ಸಾಧಿಸಬೇಕು.
ರೈತರು ಸಾಗಿಸಲು ಸಾರಿಗೆ ವೆಚ್ಚ ಸುಮಾರು 10 ರಿಂದ 15 ಸಾವಿರ ಖರ್ಚಾಗುತ್ತದೆ ಹೀಗೆ ಮಾಡಿದರೆ ಸರ್ಕಾರ ಬೆಂಬಲ ಬೆಲೆ ಘೋಷಿಸಿದರು, ರೈತರಿಗೆ ಅನುಕೂಲ ಆಗುವುದಿಲ್ಲ ಬರುವ 10ನೇ ತಾರೀಕು ಬೆಳೆ ವಿಮೆ ಬೆಳೆ ಪರಿಹಾರ ಮುಂತಾದ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಒಂದು ದಿನ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದೆ, ಆದ್ದರಿಂದ ಎಲ್ಲಾ ರೈತ ಬಾಂಧವರು ಈ ಧರಣಿಯಲ್ಲಿ ಭಾಗವಹಿಸಬೇಕು ಎಂಬುದಾಗಿ ತಿಳಿಸಿದರು.
ತಾಲೂಕು ಅಧ್ಯಕ್ಷರಾದ ಆಲೂರು ಸಿದ್ದರಾಮಣ್ಣ ಮಾತನಾಡಿ, ಹಿರಿಯೂರು ತಾಲೂಕಿನಲ್ಲಿ ಎಪಿಎಂಸಿ ಮಾರುಕಟ್ಟೆ ಇದ್ದರೂ ಇಲ್ಲದಂತಾಗಿದೆ, ರೈತರಿಗಾಗಿ ಸುಮಾರು ನೂರಕ್ಕೂ ಹೆಚ್ಚು ಎಕರೆ ವಿಸ್ತೀರ್ಣ ಜಾಗ ಇದ್ದು ಅನೇಕ ಬಿಲ್ಡಿಂಗ್ ಗಳು ಮತ್ತು ಮಾರಾಟದ ಮಳಿಗೆಗಳು ರೈತರಿಗೆ ಅನೇಕ ಸೌಲಭ್ಯಗಳು ಇದ್ದರೂ ಸಹ ಹಿರಿಯೂರು ನಗರದ ಸುತ್ತಮುತ್ತ ಖಾಸಗಿ ಮಾರುಕಟ್ಟೆಗಳು ಪ್ರಾರಂಭವಾಗುತ್ತವೆ.
ಉದಾಹರಣೆಗೆ ಅಡಿಕೆ ಮಾರುಕಟ್ಟೆ ಮತ್ತು ಇಂದು ಟಮೋಟೊ ಹಣ್ಣು ಮಾರುಕಟ್ಟೆ ಮತ್ತು ಹೂವಿನ ಮಾರುಕಟ್ಟೆ ಹಾಗೂ ದವಸ ಧಾನ್ಯಗಳ ಅಂಗಡಿಗಳಲ್ಲಿ ಮಾರಾಟ ಮಾಡುವುದು ಇವುಗಳನ್ನು ಗಮನಿಸಿದರೆ ಸರ್ಕಾರಿ ಅಧಿಕಾರಿಗಳು ಏನು ಕೆಲಸ ಮಾಡುತ್ತಾರೆ ಎಂದು ಅರ್ಥವಾಗುತ್ತಿಲ್ಲ ಕೂಡಲೇ ಸರ್ಕಾರ ಇಂಥ ಅಧಿಕಾರಿಗಳನ್ನು ಅಮಾನತ್ತು ಮಾಡಿ ರೈತರಿಗಾಗಿ ಇರುವ ಎಪಿಎಂಸಿ ಮಾರುಕಟ್ಟೆಯನ್ನು ಸದುದ್ದೇಶಕ್ಕೆ ಬಳಸಿಕೊಳ್ಳಲು ಮೇಲಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಎಚ್ಚರಿಸಿದರು .
ಈ ಸಭೆಯಲ್ಲಿ ರೈತಮುಖಂಡರುಗಳಾದ ರಂಗಸ್ವಾಮಿ, ಸಣ್ಣತಿಮ್ಮಣ್ಣ, ತಿಮ್ಮರೆಡ್ಡಿ, ಬಿ.ಆರ್.ರಂಗಸ್ವಾಮಿ, ವೆಂಕಟೇಶ್, ತಿಮ್ಮಯ್ಯ, ಜಯಣ್ಣ, ಜಗದೀಶ್, ಶಿವಣ್ಣ, ನಾರಣಪ್ಪ, ವಿರುಪಾಕ್ಷ, ಈರಣ್ಣ, ಬಾಲಕೃಷ್ಣ, ರಾಮಕೃಷ್ಣ, ದೊರೆಸ್ವಾಮಿ, ಸೇರಿದಂತೆ ಅನೇಕ ರೈತಮುಖಂಡರುಗಳು ಉಪಸ್ಥಿತರಿದ್ದರು.

