
ಹಿರಿಯೂರು:
ಹಿರಿಯೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಲ್ಪಸಂಖ್ಯಾತ ಮುಸ್ಲಿಂ ಸಮಾಜದವರು ವಾಸಿಸುವ ವಸತಿ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳಾದ ರಸ್ತೆ ಚರಂಡಿ ಸೇರಿದಂತೆ ಇನ್ನಿತರೆ ಅಭಿವೃದ್ದಿ ಚಟುವಟಿಕೆಗಳಿಗಾಗಿ ಸುಮಾರು 50ಕೋಟಿ ರೂಗಳ ಅನುದಾನದ ಅವಶ್ಯವಿದ್ದು, ಅಭಿವೃದ್ದಿ ಕಾರ್ಯಗಳಿಗೆ ಅನುವಾಗುವಂತೆ ಅಲ್ಪಸಂಖ್ಯಾತ ಕಲ್ಯಾಣ ಕಾರ್ಯಕ್ರಮಗಳಡಿ ಅನುದಾನ ಬಿಡುಗಡೆಗೊಳಿಸಬೇಕು ಎಂಬುದಾಗಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹೇಳಿದರು.
ಮಾನ್ಯ ಅಲ್ಪಸಂಖ್ಯಾತರ ಕಲ್ಯಾಣ ವಸತಿ ಮತ್ತು ವಕ್ಪ್ ಸಚಿವರಾದ ಬಿ. ಜೆಡ್. ಜಮೀರ್ ಅಹಮದ್ ಖಾನ್ ರವರನ್ನು ಭೇಟಿ ನೀಡಿ, ಅಲ್ಪಸಂಖ್ಯಾತ ಮುಸ್ಲಿಂಸಮಾಜದವರಿಗೆ ಅಲ್ಪಸಂಖ್ಯಾತ ಕಲ್ಯಾಣ ಕಾರ್ಯಕ್ರಮಗಳಡಿ 50ಕೋಟಿ ರೂಗಳ ಅನುದಾನ ಬಿಡುಗಡೆಗೊಳಿಸುವಂತೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ಈ ಕುರಿತು ಮಾನ್ಯ ಸಚಿವರಾದ ಜಮೀರ್ ಅಹಮದ್ ಖಾನ್ ರವರು ಡಿ.ಸುಧಾಕರ್ ರವರ ಮನವಿಗೆ ಸ್ಪಂದಿಸಿ, ಮಾತನಾಡಿ, ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ದಿಗೆ ಪ್ರಥಮ ಹಂತವಾಗಿ ಸುಮಾರು 25 ಕೋಟಿ ರೂಗಳ ಹಣವನ್ನು ಬಿಡುಗಡೆಗೊಳಿಸಲು ಶೀಘ್ರ ಕ್ರಮವಹಿಸುವುದಾಗಿ ಭರವಸೆ ನೀಡಿರುತ್ತಾರೆ .
ಈ ಸಂದರ್ಭದಲ್ಲಿ ಎ.ಐ.ಸಿ.ಸಿ. ಅಲ್ಪಸಂಖ್ಯಾತರ ಘಟಕ ಮುಖಂಡರು, ಹಿರಿಯೂರು ಸ್ಥಳೀಕರು ಆದ ಹೆಚ್.ಎಂ.ಷಕೀಲ್ ನವಾಜ್, ರಾಜ್ಯ ವಕ್ಪ್ ಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಆಗಿರುವ ಕೆ. ಅನ್ವರ್ ಬಾಷಾ ಮತ್ತು ಹಿರಿಯೂರು ಟೌನ್ ಸೊಸೈಟಿಯ ಅಧ್ಯಕ್ಷರಾದ ಪಿ.ಎಸ್.ಸಾದತ್ ಉಲ್ಲಾ ಉಪಸ್ಥಿತರಿದ್ದರು.
