
ಹಿರಿಯೂರು:
ಬುದ್ಧನ ಚಿಂತನೆ, ಬಸವಣ್ಣನ ಸಮಾನತೆ ಅಂಬೇಡ್ಕರ್ ಅವರ ಸಮಸಮಾಜದ ಪರಿಕಲ್ಪನೆಯಿಂದ ಕೂಡಿದ ಬೃಹತ್ ಲಿಖಿತ ಸಂವಿಧಾನ ಮಾನವೀಯ ಮೌಲ್ಯಗಳಿಂದ ಕೂಡಿದೆ ಎಂಬುದಾಗಿ ನಗರಸಭೆ ಮಾಜಿ ಸದಸ್ಯರಾದ ಜಿ.ಪ್ರೇಮ್ ಕುಮಾರ್ ಅವರು ಹೇಳಿದರು.
ನಗರದ ಭಾರ್ ರೂರಲ್ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಕಳವಿಭಾಗಿ ಶ್ರೀರಂಗನಾಥಸ್ವಾಮಿ ಸಾಂಸ್ಕೃತಿಕ ಕಲಾ ಸಂಘ, ಭಾರತ್ ರೂರಲ್ ಕೈಗಾರಿಕಾ ತರಬೇತಿ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ದಿನಾಚರಣೆ–ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಒಂದು ನೆನಪು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನ ದಿವಸ ಭಾರತೀಯರ ಪಾಲಿಗೆ ಹೆಮ್ಮೆಯ ಆಚರಣೆಯಾಗಿದೆ. ಸಂವಿಧಾನವು ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಿಸುವ ಮೂಲಕ ಪ್ರಜಾತಂತ್ರ ವ್ಯವಸ್ಥೆಯ ನಾಡಿ ಮಿಡಿತವಾಗಿದೆ. ದೇಶದ ಜನರ ಸಾಮಾಜಿಕ, ಆರ್ಥಿಕ,ರಾಜಕೀಯ ನ್ಯಾಯವನ್ನು ಸಮಾನವಾಗಿ ನೀಡುವ ಸಂಕಲ್ಪದ ಭಾರತ ಸಂವಿಧಾನ ವೈವಿದ್ಯತೆಗಳ ಸಂಗಮವಾಗಿದೆ ಎಂಬುದಾಗಿ ಅವರು ಹೇಳಿದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಚಮನ್ ಷರೀಫ್ ಅವರು ಮಾತನಾಡಿ, ಭಾರತೀಯ ಸಂವಿಧಾನವು ನಮ್ಮ ಜೀವನ ಸಂಸ್ಕಾರ ಭಾವನಗಳಿಗೆ ನವಚೈತನ್ಯ ಕೊಡಬಲ್ಲದು. ಇದು ದೇಶದ ಪ್ರತಿಯೊಬ್ಬ ಪ್ರಜೆಯ ಸ್ವಾಭಿಮಾನದ ಸಂಕೇತವಾಗಿದೆ ಎಂಬುದಾಗಿ ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಸ್ವಾಮಿವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಸ್.ಜಿ.ರಂಗಸ್ವಾಮಿಸಕ್ಕರ ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎಂ.ರಮೇಶ್, ಕ.ಸ.ಪಾ. ಕಸಬಾ ಹೋಬಳಿ ಘಟಕದ ಗೌರವ ಕಾರ್ಯದರ್ಶಿ ಎಸ್.ಅಸ್ಗರ್ ಅಹಮ್ಮದ್, ಜೆ.ಅನಿತಾ, ಅಂಜಲಿ, ಸಂತೋಷ್ ಕುಮಾರ್, ರಾಕೇಶ್, ಮಂಜುನಾಥ, ಅಜಿತ್, ಗಗನ್, ಸುನಿಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
