
ಹಿರಿಯೂರು :
ಚಿತ್ರದುರ್ಗವನ್ನು ಹೈದರಾಲಿಯ ಸೈನ್ಯದ ದಾಳಿಯಿಂದ ಕಾಪಾಡಲು ಕೈಯಲ್ಲಿ ಒನಕೆ ಹಿಡಿದು ಹೋರಾಡುವ ಮೂಲಕ ಚಿತ್ರದುರ್ಗದ ಕೋಟೆಯನ್ನು ಪರಕೀಯರ ದಾಳಿಯಿಂದ ರಕ್ಷಿಸಿದ ವೀರವನಿತೆ ಓನಕೆ ಓಬವ್ವನ ಧೈರ್ಯ, ಸಾಹಸ, ಇಂದಿನ ಮಹಿಳೆಯರಿಗೆ ಸ್ಪೂರ್ತಿಯಾಗಬೇಕು ಎಂಬುದಾಗಿ ತಾಲೂಕು ದಂಡಾಧಿಕಾರಿಗಳು ಹಾಗೂ ತಹಶೀಲ್ದಾರರಾದ ಎಂ.ಸಿದ್ದೇಶ್ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳು ಆಚರಣೆ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವೀರವನಿತೆ ಓಬವ್ವರವರ 363ನೇ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಅವರು ಮಾತನಾಡಿದರು.

ವಿಶೇಷ ಉಪನ್ಯಾಸ ನೀಡಿದ ಟಿ.ಶಿವಪ್ರಸಾದ್ ಗನ್ನಾಯಕನಹಳ್ಳಿ ಮಾತನಾಡಿ, ಇತಿಹಾಸದ ಪುಟಗಳಲ್ಲಿ ನಮ್ಮ ಚಿತ್ರದುರ್ಗ ಜಿಲ್ಲೆಯನ್ನು ಅಚ್ಚಳಿಯದೇ ಉಳಿಯುವಂತೆ ಮಾಡಿದ ವೀರವನಿತೆ ಒನಕೆ ಓಬವ್ವ ನಮ್ಮ ಚಿತ್ರದುರ್ಗದ ಹೆಮ್ಮೆಯಾಗಿದ್ದು, ಇಂದಿನ ಯುವಜನತೆ ಒನಕೆ ಓಬವ್ವನ ಜೀವನ ಹಾಗೂ ಅವರ ಆದರ್ಶಗಳನ್ನು ತಿಳಿಯುವ ಪ್ರಯತ್ನವನ್ನು ಮಾಡಬೇಕು ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಗರಸಭೆ ಪೌರಾಯುಕ್ತರಾದ ವಾಸೀಂ, ಬಿ.ನರಸಿಂಹಸ್ವಾಮಿ, ಹಿರಿಯೂರು ತಾಲ್ಲೂಕು ಛಲವಾದಿ ಸಮಾಜದ ಅಧ್ಯಕ್ಷರಾದ ಟಿ.ಭೂತೇಶ್, ಸಮಾಜದ ಮುಖಂಡರುಗಳು ಹಾಗೂ ನಗರಸಭೆ ಸದಸ್ಯರಾದ ಜಿ.ಎಸ್.ತಿಪ್ಪೇಸ್ವಾಮಿ, ಖಾದಿಹೇಮಂತರಾಜ್, ಚಂದ್ರಶೇಖರ್, ಬಿ.ಎಸ್.ಪ್ರಸನ್ನಕುಮಾರ್, ಕೇಶವಮೂರ್ತಿ, ಬಿಸಿಎಂ ಶಿವಕುಮಾರ್, ಶ್ರೀನಿವಾಸ್ ರೆಡ್ಡಿ, ಸೇರಿದಂತೆ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

ಆರಂಭದಲ್ಲಿ ತಾಲ್ಲೂಕು ಛಲವಾದಿ ಸಮಾಜದ ಅಧ್ಯಕ್ಷರಾದ ಟಿ.ಭೂತೇಶ್ ಸ್ವಾಗತಿಸಿದರು. ನರಸಿಂಹಸ್ವಾಮಿ ಕಾರ್ಯಕ್ರಮವನ್ನು ನಿರೂಪಿಸಿದರು.

