
ಹಿರಿಯೂರು :
ಚಿತ್ರದುರ್ಗ ನಗರದಲ್ಲಿ ಅಂಜಿನಮ್ಮ ಎಂಬ ದಲಿತ ದೇವದಾಸಿಯ ಮೇಲೆ ಪಿವಿಎಸ್ ಆಸ್ಪತ್ರೆಯ ಡಾ.ಶ್ರೀಧರ್ ಮೂರ್ತಿಯವರ ಕಾರ್ ಡ್ರೈವರ್ ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಿರುವಂತಹ ಅಮಾನವೀಯ ಘಟನೆ ನಡೆದಿದ್ದು, ಇದು ನಿಜಕ್ಕೂ ಖಂಡನೀಯ ಸಂಗತಿಯಾಗಿದೆ ಎಂಬುದಾಗಿ ದಲಿತ ಸಂರಕ್ಷಣಾ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಎಸ್.ರಾಜು ಹೇಳಿದರು.
ನಗರದ ಪೋಲೀಸ್ ಠಾಣೆಯಲ್ಲಿ ದಲಿತ ಮಹಿಳೆ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ, ದಲಿತ ಸಂರಕ್ಷಣಾ ಸೇನೆ ವತಿಯಿಂದ ಹಿರಿಯೂರು ತಾಲೂಕು ವೃತ್ತ ನಿರೀಕ್ಷಕರಾದ ರಾಘವೇಂದ್ರ ಅವರಿಗೆ ಮನವಿಪತ್ರವನ್ನು ಸಲ್ಲಿಸಿ, ನಂತರ ಅವರು ಮಾತನಾಡಿದರು.
ದಲಿತ ಮಹಿಳೆ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆ ವಿಧಿಸುವ ಮೂಲಕ ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಪ್ಪಿಸಬೇಕು, ಇಲ್ಲವಾದಲ್ಲಿ ದಲಿತ ಸಂರಕ್ಷಣಾ ಸೇನೆ ವತಿಯಿಂದ ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ ಎಂಬುದಾಗಿ ಅವರು ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ದಲಿತ ಸಂರಕ್ಷಣಾ ಸೇನೆ ಸಂಸ್ಥಾಪಕ ರಾಜ್ಯಅಧ್ಯಕ್ಷರಾದ ಬಿ.ಎಸ್.ವೃಷಬೇಂದ್ರಬಾಬು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಎಸ್.ರಾಜು, ರಾಜ್ಯ ಉಪಾಧ್ಯಕ್ಷರಾದ ರಾಯಣ್ಣ, ರಾಜ್ಯ ಸಂಘಟನೆ ಕಾರ್ಯದರ್ಶಿಯಾದ ದಿನೇಶ್ ರವರು ಉಪಸ್ಥಿತರಿದ್ದರು.
