
ಹಿರಿಯೂರು :
ನಮ್ಮ ಸಮಾಜದಲ್ಲಿ ಪೋಲೀಸ್ ಇಲಾಖೆಯ ಬಗ್ಗೆ ಇರುವ ಭಯವನ್ನು ದೂರಮಾಡಿ, ಸಾರ್ವಜನಿಕರು ಹಾಗೂ ಪೋಲೀಸ್ ಇಲಾಖೆ ನಡುವೆ ಸ್ನೇಹಸೌಹಾರ್ದತೆಯನ್ನು ಬೆಳೆಸುವ ಮೂಲಕ ಸಮಾಜಕ್ಕೆ “ಉತ್ತಮ ಸಕ್ರಿಯ ಪೋಲೀಸ್ ಸೇವೆ” ಒದಗಿಸುವ ಉದ್ದೇಶದಿಂದ “ಮನೆಮನೆಗೆ ಪೋಲೀಸ್” ಕಾರ್ಯಕ್ರಮವನ್ನು ರೂಪಿಸಿದ್ದು, ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂಬುದಾಗಿ ನಗರಠಾಣೆ ಸಬ್ ಇನ್ಸ್ ಪೆಕ್ಟರ್ ಲಕ್ಷ್ಮೀನರಸಿಂಹಯ್ಯ ಹೇಳಿದರು.
ನಗರದ ನೆಹರು ಮೈದಾನದ ಮನೆಯಂಗಳದಲ್ಲಿ ಪೋಲೀಸ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಮನೆಮನೆಗೆ ಪೋಲೀಸ್” ಸಕ್ರಿಯ ಪೋಲೀಸ್ ಸೇವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ನಂತರ ಅವರು ಮಾತನಾಡಿದರು.

ಇಂದಿನ ಆಧುನಿಕ ಜಗತ್ತಿನಲ್ಲಿ ಸೈಬರ್ ವಂಚನೆಗಳು ಹೆಚ್ಚಾಗುತ್ತಿದ್ದು, ನೀವು ಕೇವಲ ಲೈಕ್ ಹಾಗೂ ಶೇರ್ ಮಾಡುವ ಮೂಲಕ ಹಣ ಸಂಪಾದಿಸಬಹುದು ಎಂಬ ಜಾಹಿರಾತು ನೀಡಿ ವಂಚಿಸುತ್ತಿರುವ ಜೊತೆಗೆ ಮಹಿಳಾ ಸ್ವಸಹಾಯ ಸಂಘಗಳ ಹೆಸರಿನಲ್ಲಿ ಸಾಲ ಕೋಡುವುದಾಗಿ ನಂಬಿಸಿ, ನಿಮ್ಮ ಆಧಾರ್ ಕಾರ್ಡ್ ಕೇಳಿ ವಂಚಿಸುತ್ತಿದ್ದು, ಸಾರ್ವಜನಿಕರು ಜಾಗೃತರಾಗಿರಬೇಕು ಎಂಬುದಾಗಿ ಹೇಳಿದರು.
ಸಾರ್ವಜನಿಕರು ಪೋಲೀಸ್ ಇಲಾಖೆಯೊಂದಿಗೆ ಕೈಜೋಡಿಸಿದರೆ ಸಮಾಜದಲ್ಲಿ ಕುಂದುಕೊರತೆಗಳನ್ನು ಹಾಗೂ ಸಮಸ್ಯೆಗಳನ್ನು ನಿವಾರಿಸಬಹುದಾಗಿದ್ದು, ಈ ನಿಟ್ಟಿನಲ್ಲಿ ನಿಮ್ಮ ಭದ್ರತೆ ಮತ್ತು ಸುರಕ್ಷತೆಗಾಗಿ ಸ್ಥಳೀಯವಾಗಿ ಬೀಟ್ ಬರುವ ಪೋಲೀಸ್ ಇಲಾಖೆ ಸಿಬ್ಬಂದಿಗಳಿಗೆ ಸರಿಯಾದ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂಬುದಾಗಿ ಹೇಳಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪ ಮಾತನಾಡಿ, ಬ್ರೀಟಿಷರ ಕಾಲದ ಹಳೆಯ ಪೋಲೀಸ್ ವ್ಯವಸ್ಥೆ ಬದಲಾಗಿದ್ದು, ಇದೀಗ ವಠಾರದ ಮಹಿಳೆಯರು ಸಹ ನೇರವಾಗಿ ಧೈರ್ಯದಿಂದ ಪೋಲೀಸ್ ಠಾಣೆಗೆ ಹೋಗಿ ಬರುವಂತ ವ್ಯವಸ್ಥೆ ನಿರ್ಮಾಣವಾಗಿದ್ದು, ಯಾವುದೇ ತುರ್ತು ಸಂದರ್ಭದಲ್ಲಿ ವಠಾರದ ಜನರು ಈ ಜನಸ್ನೇಹಿ ಪೋಲೀಸರನ್ನು ಸಂಪರ್ಕಿಸಿ, ಸಹಾಯ ಪಡೆಯಬಹುದಾಗಿದೆ ಎಂಬುದಾಗಿ ಹೇಳಿದರು.

ಈ ಸಂದರ್ಭದಲ್ಲಿ ನಗರಠಾಣೆ ಸಬ್ ಇನ್ಸ್ ಪೆಕ್ಟರ್ ಲಕ್ಷ್ಮೀನರಸಿಂಹಯ್ಯ ಪೋಲೀಸ್ ಅಧಿಕಾರಿ ದಿವ್ಯ, ಪತ್ರಕರ್ತರಾದ ಆಲೂರು ಹನುಮಂತರಾಯಪ್ಪ, ಸ್ಥಳೀಯ ನಿವಾಸಿಗಳಾದ ಮಹೇಶ್, ಶೇಖರ್, ಶ್ರೀಮತಿಶಂಕುಂತಲಮ್ಮ, ಶ್ರೀಮತಿನಿರ್ಮಲಾ, ಶ್ರೀಮತಿಲಾವಣ್ಯ, ಶ್ರೀಮತಿಪೂರ್ಣಿಮಾ, ಶ್ರೀಮತಿವಸಂತಾ, ಶ್ರೀಮತಿಭಾಗ್ಯಲಕ್ಷ್ಮಿ, ಶ್ರೀಮತಿನಂದಿನಿ, ಸವಿತಾ, ಸಾಕಮ್ಮ, ಅಂಗನವಾಡಿ ಟೀಚರ್ ಗಂಗಮ್ಮ, ಸಹಾಯಕಿ ಯಮುನಾ, ಕು.ಪೂಜಾ, ಸೇರಿದಂತೆ ನಗರದ 20 ನೇ ವಾರ್ಡ್ ನ ವಠಾರದ ಜನರು ಉಪಸ್ಥಿತರಿದ್ದರು.

