
ಹಿರಿಯೂರು:
ನಗರದ ಸಾರ್ವಜನಿಕರು ಪ್ಲಾಸ್ಟಿಕ್ ಮುಕ್ತ ಮಾಡುವಲ್ಲಿ ತಾವೆಲ್ಲರೂ ನಗರಸಭೆಯ ಜೊತೆಗೆ ಕೈಜೋಡಿಸಬೇಕು. ಹಾಗೆ ನಾವು ಬೇರೆ ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಆ ದೇಶಗಳಲ್ಲಿ ಸ್ವಚ್ಛತೆ ನೈರ್ಮಲ್ಯ ಆರೋಗ್ಯ ಪರಿಸರ ಕಾಳಜಿ ಇಂತಹ ವಿಷಯಗಳಿಗೆ ಬಹಳ ಮಹತ್ವವನ್ನು ನೀಡುತ್ತಾರೆ ಎಂಬುದಾಗಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ ಅವರು ಹೇಳಿದರು.
ಕರ್ನಾಟಕ ಸರ್ಕಾರ ಹಿರಿಯೂರು ಆಡಳಿತ ಮತ್ತು ತಾಲ್ಲೂಕು ಪಂಚಾಯತಿ ಹಾಗೂ ನಗರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಅಂಗವಾಗಿ ಪರಿಸರ ಸಂರಕ್ಷಣೆ ಕುರಿತು ಹಮ್ಮಿಕೊಳ್ಳಲಾಗಿದ್ದ ಬೀದಿ ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ರಾಜ್ಯದ ಜನತೆ ನಿಂತಲ್ಲಿಯೇ ಉಗುಳುವುದು, ಪರಿಸರ ಬಗ್ಗೆ ಕಾಳಜಿ ಇಲ್ಲದಿರುವುದು ಹಾಗೂ ಅತಿ ಹೆಚ್ಚು ಪ್ಲಾಸ್ಟಿಕ್ ಗಳನ್ನು ಬಳಸುತ್ತಿರುವುದು ಇವೆಲ್ಲವೂ ಕೂಡ ನಮ್ಮ ವಿನಾಶಕ್ಕೆ ನಾವೇ ದಾರಿ ಮಾಡಿಕೊಟ್ಟಂತೆ.ಆದ್ದರಿಂದ ಹಿರಿಯೂರಿನ ಜನತೆ ಇನ್ನು ಮುಂದೆ ಆದರೂ ಸರ್ಕಾರದ ಜೊತೆ ಹಾಗೆ ನಗರಸಭೆ ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಆಡಳಿತ ಜೊತೆಗೆ ಕೈಜೋಡಿಸಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲು ತಾವೆಲ್ಲರೂ ಸಹಕಾರ ನೀಡಬೇಕು ಎಂಬುದಾಗಿ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಸಾಕ್ಷರತಾ ಸಂಯೋಜಕರಾದ ಸಿ.ಶಿವಾನಂದ ಹಾಗೂ ಕೂನಿಕೆರೆ ಹೆಚ್.ಎಸ್. ಮಾರುತೇಶ ಕಲಾವಿದ ಅವರು ಮಾತನಾಡಿದರು.
ಕಲಾ ತಂಡ ಕಲಾವಿದರಿಂದ ಸ್ವಚ್ಛತಾ, ನೀರು , ನೈರ್ಮಲ್ಯ ಪ್ಲಾಸ್ಟಿಕ್ ನಿಷೇಧ ಪರಿಸರ ಕಾಳಜಿ ವಿವಿಧ ಜಾಗೃತಿಯ ಹಾಡುಗಳೊಂದಿಗೆ ಬೀದಿ ನಾಟಕ ಕಾರ್ಯಕ್ರಮವನ್ನು ಹಿರಿಯೂರು ನಗರದ ನೆಹರು ಮಾರ್ಕೆಟ್ ಹತ್ತಿರ ಹಾಗೂ ಖಾಸಗಿ ಬಸ್ ನಿಲ್ದಾಣದ ಹತ್ತಿರ ಮತ್ತು ಟಿವಿ ಸರ್ಕಲ್ ಹಂಡ್ರೆಡ್ ಫೀಟ್ ರಸ್ತೆಯಲ್ಲಿ ಕಾರ್ಯಕ್ರಮವನ್ನು ನೀಡಿದರು.
ಈ ಸಂದರ್ಭದಲ್ಲಿ ಕಲಾವಿದರಾದ ಹೆಚ್.ಎಸ್.ಮಾರುತೇಶ, ಆಶಾ, ಸುಮ, ಚೆನ್ನಬಸಪ್ಪ, ಯಲ್ಲಪ್ಪ , ಪರಶುರಾಮ್ ಕಲಾವಿದರಿಂದ ಸ್ವಚ್ಛತೆಯ ಬೀದಿ ನಾಟಕ ಕಾರ್ಯಕ್ರಮ ನಡೆಸಿಕೊಟ್ಟರು.
